ದಾವಣಗೆರೆ: ಪೋಷಕರ ವಿರೋಧ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದ ಯುವ ಜೋಡಿಯ ಮೇಲೆ ಪೊಲೀಸ್ ಠಾಣೆಯ ಆವರಣದಲ್ಲಿಯೇ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣದಲ್ಲಿ ನಡೆದಿದೆ.
ದಾಗಿನಕಟ್ಟೆ ಗ್ರಾಮದ 18 ವರ್ಷದ ಲೀಲಾವತಿ, ಕಂಚುಗಾರನಹಳ್ಳಿಯ 22 ವರ್ಷದ ಸಿದ್ದೇಶ್ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗಷ್ಟೇ ಇಬ್ಬರೂ ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದರು. ಮದುವೆಯಾದಾಗಿನಿಂದ ಹುಡುಗಿಯ ಕಡೆಯವರಿಂದ ತಮಗೆ ಜೀವ ಬೆದರಿಕೆ ಇದೆ ಎಂದು ಹೆದರಿದ ಜೋಡಿ, ರಕ್ಷಣೆ ಕೋರಿ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು. ದೂರನ್ನು ಆಲಿಸಿದ ಎಸ್ಪಿ ಸೂಕ್ತ ಕ್ರಮ ಹಾಗೂ ರಕ್ಷಣೆಗಾಗಿ ಸಂಬಂಧಪಟ್ಟ
ಬಸವಾಪಟ್ಟಣ ಪೊಲೀಸ್ ಠಾಣೆಗೆ ಹೋಗುವಂತೆ
ಜೋಡಿಗೆ ಸೂಚಿಸಿದ್ದರು.
ಎಸ್ಪಿಯವರ ಸೂಚನೆಯ ಮೇರೆಗೆ ಸಿದ್ದೇಶ್ ಹಾಗೂಲೀಲಾವತಿ ದೂರು ನೀಡಲು ಬಸವಾಪಟ್ಟಣ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಆದರೆ, ಈ ಜೋಡಿಗಿಂತ ಮೊದಲೇ ಅಲ್ಲಿ ಹೊಂಚು ಹಾಕಿ ಕಾಯುತ್ತಿದ್ದ ಹುಡುಗಿಯ ಸಂಬಂಧಿಕರು ಠಾಣೆಯ ಆವರಣ ಪ್ರವೇಶಿಸುತ್ತಿದ್ದಂತೆಯೇ ಚಾಕುವಿನಿಂದ ಯುವಕನಿಗೆ ಇರಿದಿದ್ದಾರೆ.
ಈ ದಾಳಿಯಲ್ಲಿ ಯುವಕ ಸಿದ್ದೇಶ್ ಕೈಗೆ ಗಂಭೀರವಾಗಿ ಗಾಯವಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ತಕ್ಷಣವೇ ಆತನನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಕೈಗೆ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆ. ಈ ಸಂಬಂಧ
ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.


