ದಾವಣಗೆರೆ: ಚಿಗಟೇರಿ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಎರಡು ಆಕ್ಸಿಜನ್ ಸಿಲಿಂಡರ್ ಭೀಕರವಾಗಿ ಸ್ಫೋಟಗೊಂಡಿದ್ದು, ಆಪರೇಷನ್ ಥಿಯೇಟರ್ ಮತ್ತು ಸುತ್ತಮುತ್ತಲಿನ ಕೊಠಡಿಗಳೂ ಜಖಂಗೊಂಡಿವೆ.
ತನಿಖೆಗೆ ತಂಡ ರಚನೆ
ಈ ಬಗ್ಗೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಯು.ಟಿ. ಖಾದರ್ ಪ್ರತಿಕ್ರಿಯೆ ನೀಡಿದ್ದು, ದಾವಣಗೆರೆ ಜಿಲ್ಲಾ ಆಸ್ಪತ್ರೆ ಸ್ಫೋಟ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.ಘಟನೆಗೆ ನಿಖರವಾದ ಕಾರಣಗಳನ್ನು ಪತ್ತೆ ಹಚ್ಚಲು ಉನ್ನತ ಅಧಿಕಾರಿಗಳ ತನಿಖಾ ತಂಡ ರಚಿಸಲು ಆದೇಶಿಸಿದ್ದಾರೆ.ಇದಲ್ಲದೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ತನಿಖೆ ನಡೆಯಲಿದ್ದು, ಈ ಎರಡೂ ವರದಿಗಳು ಕೈಸೇರಿದ ನಂತರ ಇಲಾಖೆಯು ಪರಿಶೀಲನೆ ನಡೆಸಿ ನಿಯಮಾನುಸಾರ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು.
ಈ ದುರಂತ ಆಗಿದ್ದು ಹೇಗೆ.?
ಆಸ್ಪತ್ರೆಯ ಕಿವಿ, ಮೂಗು, ಗಂಟಲು ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಬೆಳಗ್ಗೆ 8:45ರ ವೇಳೆಗೆ ಅರಿವಳಿಕೆ ತಜ್ಞರು ಆಕ್ಸಿಜನ್ ಹಾಗೂ ಯಂತ್ರೋಪಕರಣಗಳನ್ನು ಪರಿಶೀಲಿಸುತ್ತಿದ್ದಾಗ ಏಕಾಏಕಿ ವರ್ಕ್ ಸ್ಟೇಷನ್ನಲ್ಲಿ ಸಣ್ಣದಾಗಿ ಕಿಡಿ ಕಾಣಿಸಿಕೊಂಡಿದೆ. ತಕ್ಷಣವೇ ಎಚ್ಚೆತ್ತ ಸಿಬ್ಬಂದಿ ಮತ್ತು ವೈದ್ಯರು ಹೊರಗೆ ಓಡಿ ಬಂದಿದ್ದಾರೆ. ಕೆಲವೇ ನಿಮಿಷಗಳಲ್ಲಿ ಕೊಠಡಿಯೊಳಗಿದ್ದ ಎರಡು ಆಕ್ಸಿಜನ್ ಸಿಲಿಂಡರ್ಗಳು ಸ್ಫೋಟಗೊಂಡಿವೆ.
ಆಕ್ಸಿಜನ್ ಮತ್ತು ನೈಟ್ರೋಜನ್ ಗ್ಯಾಸ್ ಇದ್ದ ಕಾರಣ ಬೆಂಕಿ ಇಡೀ ಕೊಠಡಿಗೆ ಬೆಂಕಿ ಆವರಿಸಿದೆ. ಸ್ಫೋಟದ ತೀವ್ರತೆಗೆ ಆಪರೇಷನ್ ಥಿಯೇಟರ್ ಮಾತ್ರವಲ್ಲದೆ ಅದರ ಸುತ್ತಮುತ್ತಲಿನ ಇತರೆ ಕೊಠಡಿಗಳೂ ಜಖಂಗೊಂಡಿವೆ. ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದಸಿಬ್ಬಂದಿ ತಕ್ಷಣ ಮುನ್ನೆಚ್ಚರಿಕೆ ವಹಿಸಿ ಹೊರಗೆ ಬಙದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಪ್ಪಿದ ಭೀಕರ ಅನಾಹುತ..!!!
ಅರಿವಳಿಕೆ ತಜ್ಞರ ಪ್ರಕಾರ, ಸಾಮಾನ್ಯವಾಗಿ ರೋಗಿಗಳನ್ನು ಆಪರೇಷನ್ ಥಿಯೇಟರ್ ಪಕ್ಕದ ಸಿದ್ಧತಾ ಕೋಣೆಯಲ್ಲಿ ಇರಿಸಲಾಗಿರುತ್ತದೆ. ಈ ಘಟನೆ ಸಂಭವಿಸಿದಾಗ ರೋಗಿಗಳನ್ನು ಇನ್ನೂ ಮುಖ್ಯ ಆಪರೇಷನ್ ಟೇಬಲ್ಗೆ ಕರೆತಂದಿರಲಿಲ್ಲ. ಒಂದು ವೇಳೆ ರೋಗಿಗಳಿಗೆ ಅರಿವಳಿಕೆ (ಮದ್ದು) ನೀಡಿ ಶಸ್ತ್ರಚಿಕಿತ್ಸೆ ಆರಂಭಿಸಿದ್ದಿದ್ದರೆ ಇವತ್ತು ಊಹಿಸಲೂ ಸಾಧ್ಯವಾಗದ ಭೀಕರ ದುರಂತ ಸಂಭವಿಸುತ್ತಿತ್ತು. ರೋಗಿಗಳು ಕೋಣೆಯೊಳಗೆ ಬರದೇ ಇದ್ದುದರಿಂದ ದೊಡ್ಡ ಮಟ್ಟದ ಪ್ರಾಣಹಾನಿ ತಪ್ಪಿದೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಾಗೇಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದಾಗಿ ಆಪರೇಷನ್ ಥಿಯೇಟರ್ನಲ್ಲಿದ್ದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಅತ್ಯಾಧುನಿಕ ವೈದ್ಯಕೀಯ ಸಾಮಗ್ರಿಗಳು ಮತ್ತು ಸಲಕರಣೆಗಳು ಸುಟ್ಟು ಕರಕಲಾಗಿವೆ.


