ದಾವಣಗೆರೆ: ಸರಗಳ್ಳತನ ಮಾಡಿದ ಆರೋಪಿಯನ್ನು ವಿದ್ಯಾನಗರ ಪೊಲೀಸರು ಬಂಧನ ಮೂಡಿದ್ದು, ಆರೋಪಿಯಿಂದ 4.20 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.
ಜೂ.20ರಂದು ಬೆಳಿಗ್ಗೆ ಎಸ್.ಎಸ್ ಲೇಔಟ್ `ಎ’ ಬ್ಲಾಕ್ ಆಶಾಕಿರಣ ಟ್ರಸ್ಟ್ ಹತ್ತಿರದ ತಮ್ಮ ಮನೆಗೆ ಹೋಗುತ್ತಿದ್ದಾಗ, ಯಾರೋ ಒಬ್ಬ ವ್ಯಕ್ತಿ ತಮ್ಮನ್ನು ಮಾತನಾಡಿಸುವ ನೆಪದಲ್ಲಿ ಹಿಂದಿನಿಂದ ಬಂದು ಏಕಾಏಕಿ ಕೊರಳಿಗೆ ಕೈ ಹಾಕಿ ಎರಡು ಎಳೆಯ ಬಂಗಾರದ ಸರವನ್ನು ಕಿತ್ತುಕೊಂಡು ಹೋಗಿದ್ದಾನೆ ಎಂದು ಸುಮಾ ಎಂಬುವರು ವಿದ್ಯಾನಗರ ಠಾಣೆಗೆ ಹಾಜರಾಗಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿ ತನಿಖಾ ತಂಡ ರಚಿಸಲಾಗಿತ್ತು.
ಎಸ್ಪಿ ಪರಮೇಶ್ವರ ಹೆಗಡೆ ಹಾಗೂ ಡಿವೈಎಸ್ಪಿ ಬಿ. ಶರಣ ಬಸವೇಶ್ವರ ಮಾರ್ಗದರ್ಶನದಲ್ಲಿ ವಿದ್ಯಾನಗರ ಠಾಣೆಯ ಪೊಲೀಸ್ ನಿರೀಕ್ಷಕ ಶಿಲ್ಪಾ ವೈ.ಎಸ್. ನೇತೃತ್ವದ ತಂಡವು ಪ್ರಕರಣದ ಆರೋಪಿ ಪ್ರದೀಪ್ ಅಲಿಯಾಸ್ ಪ್ರದೀಪಾಚಾರಿ (38) ವ್ಯಕ್ತಿಯನ್ನು ಬಂಧಿಸಿದೆ. ಆರೋಪಿಯಿಂದ ಸರಗಳ್ಳತನ ಮಾಡಿದ್ದ 4.20 ಲಕ್ಷ ರೂ. ಮೌಲ್ಯದ 30.440 ಗ್ರಾಂ ತೂಕದ ಎರಡು ಎಳೆಯ ಬಂಗಾರದ ಸರವನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶಿಲ್ಪಾ ವೈ.ಎಸ್. ಹಾಗೂ ಸಿಬ್ಬಂದಿಗಳಾದ ಮಲ್ಲೇಶ, ಮಾಲತೇಶ, ಬಸವರಾಜ, ಕೊಟ್ರೇಶ, ಚಂದ್ರಪ್ಪ ಹಾಗೂ ಕವಿತಾ ಅವರನ್ನು ಎಸ್ಪಿ ಹೆಚ್.ಟಿ. ಶೇಖರ್ ಅವರು ಶ್ಲಾಘಿಸಿದ್ದಾರೆ.


