ದಾವಣಗೆರೆ: ಇಂದಿನ ಯುವ ಪೀಳಿಗೆ ಪರಿಸರ ಸಂರಕ್ಷಣೆಗೆ ಹೆಚ್ಚಿನ ಕಾಳಜಿವಹಿಸಿ ಈಗಿರುವ ಗಿಡಗಳನ್ನು ರಕ್ಷಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು ತಿಳಿಸಿದರು.
ದಾವಣಗೆರೆ: ಈ ಏರಿಯಾದಲ್ಲಿ ಸಂ.4ಗಂಟೆ ವರೆಗೆ ವಿದ್ಯುತ್ ವ್ಯತ್ಯಯ
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ , ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಪರಿಸರ ಸಂರಕ್ಷಣಾ ಇಲಾಖಾ ವತಿಯಿಂದ ಬಿಐಟಿ ಇಂಜಿನಿಯರಿಂಗ್ ಕಾಲೇಜು ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಾವಣಗೆರೆ: ಸರ್ಕಾರದಿಂದ 200 ಮನೆ ಹಂಚಿಕೆಗೆ ಅರ್ಜಿ ಆಹ್ವಾನ
ಹವಾಮಾನ ಬದಲಾವಣೆ – ಪ್ರಕೃತಿಯಿಂದ ಪ್ರೇರಿತ , ಹವಾಮಾನಕ್ಕಾಗಿ ನಮ್ಮ ಭವಿಷ್ಯಕ್ಕಾಗಿ ಎಂಬ ಘೋಷವಾಕ್ಯದೊಂದಿಗೆ ವಿಶ್ವ ಪರಿಸರ ದಿನವನ್ನು ಇಂದು ಆಚರಿಸಲಾಗುತ್ತಿದೆ. ಪರಿಸರ ದಿನಾಚರಣೆಯು ಕೇವಲ ಒಂದು ದಿನದ ಆಚರಣೆಯಾಗದೆ, ಅರ್ಥಪೂರ್ಣವಾಗಬೇಕಾದರೆ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿಯಬೇಕಾದ ಅಗತ್ಯವಿದೆ. ಪರಿಸರ ಸಂರಕ್ಷಣೆಯ ಬಗ್ಗೆ ಕೇವಲ ಮಾತುಗಳನ್ನು ಆಡುವುದರಿಂದ ಅಥವಾ ಉಪನ್ಯಾಸ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ. ನಾವೆಲ್ಲರೂ ನಮ್ಮ ದೈನಂದಿನ ವೈಯಕ್ತಿಕ ಜೀವನದಲ್ಲಿ ಬದಲಾವಣೆ ತರಬೇಕು ಮತ್ತು ತಪ್ಪುಗಳನ್ನು ಕಂಡಾಗ ಪ್ರತಿಭಟಿಸುವ ಮನೋಇಚ್ಛೆಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಮನೆ ಮುಂದೆ ರಸ್ತೆಗಳಲ್ಲಿಯೇ ತೊಳೆಯುವುದು, ಕಾರು ಹಾಗೂ ಸ್ಕೂಟರ್ಗಳನ್ನು ಪ್ರತಿದಿನ ತೊಳೆಯುವ ಮೂಲಕ ನೀರನ್ನು ವ್ಯರ್ಥ ಮಾಡಬಾರದು. ಒಂದು ಮೊಬೈಲ್ ತಯಾರಿಕೆಗೆ ಸುಮಾರು 5000 ಲೀಟರ್ಗಳಷ್ಟು ನೀರು ಬೇಕಾಗುತ್ತದೆ, ತಂತ್ರಜ್ಞಾನದ ಅತಿಯಾದ ಬಳಕೆಯಿಂದ ಎಷ್ಟು ನೀರು ಪರೋಕ್ಷವಾಗಿ ವ್ಯರ್ಥವಾಗುತ್ತಿದೆ ಎಂಬುದನ್ನು ಜನರು ಅರಿಯಬೇಕು ಎಂದರು.
ದಾವಣಗೆರೆ ನಗರದ ಕುಡಿಯುವ ನೀರಿನ ಮೂಲವಾಗಿರುವ ಕುಂದವಾಡ ಕೆರೆಯ ಸಂರಕ್ಷಣೆಗೆ ವಾರಕ್ಕೆ ಎರಡು ಬಾರಿ ಸ್ವಯಂಸೇವಕರು ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿದ್ದರೂ, ಸಾರ್ವಜನಿಕರು ಅಲ್ಲಿಗೆ ಬಂದು ಪ್ಲಾಸ್ಟಿಕ್, ಇತರ ತ್ಯಾಜ್ಯ ಹಾಗೂ ಕಟ್ಟಡ ಧ್ವಂಸಗೊಳಿಸಿದ ಅವಶೇಷಗಳನ್ನು ಸುರಿಯುತ್ತಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.
ದಾವಣಗೆರೆ ನಗರದಲ್ಲಿ 5 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿದ್ದು, ಕೇವಲ 300 ಜನ ಪೌರಕಾರ್ಮಿಕರಿದ್ದಾರೆ. ಈ 5 ಲಕ್ಷ ಜನರು ಮಾಡುವ ನೈರ್ಮಲ್ಯವನ್ನು ಕೇವಲ 300 ಜನ ಸ್ವಚ್ಛಗೊಳಿಸಲು ಹೇಗೆ ಸಾಧ್ಯ? ವ್ಯವಸ್ಥೆ ಸುಧಾರಿಸಬೇಕಾದರೆ ಕೇವಲ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳ ಪ್ರಯತ್ನ ಸಾಕಾಗುವುದಿಲ್ಲ, ಸಾರ್ವಜನಿಕರ ಸಹಕಾರವೂ ಅತಿ ಮುಖ್ಯ ಎಂದರು.
ಪ್ರಸ್ತುತ ಸಮುದ್ರದ 1 ಲಕ್ಷಕ್ಕೂ ಹೆಚ್ಚು ಚದರ ಕಿಲೋಮೀಟರ್ ಪ್ರದೇಶದಲ್ಲಿ ಸುಮಾರು 4 ಮೀಟರ್ ದಪ್ಪದಷ್ಟು ಪ್ಲಾಸ್ಟಿಕ್ ತ್ಯಾಜ್ಯ ಶೇಖರಣೆಯಾಗಿದೆ. ತುಂಗಭದ್ರಾ ಮುಂತಾದ ನದಿಗಳ ಮೂಲಕ ಪ್ಲಾಸ್ಟಿಕ್ ಸೇರಿದಂತೆ ಇರಬಾರದ ಗಲೀಜು ಕಸವನ್ನೆಲ್ಲ ನಾವು ನೇರವಾಗಿ ಸಮುದ್ರಕ್ಕೆ ತಲುಪಿಸುತ್ತಿದ್ದೇವೆ. ತಾಯಂದಿರು ಹಾಲಿನ ಪ್ಯಾಕೆಟ್ ಕಟ್ ಮಾಡುವಾಗ ಅದರ ತುದಿಯನ್ನು ಸಂಪೂರ್ಣವಾಗಿ ಕತ್ತರಿಸಿ ಬೇರ್ಪಡಿಸುವುದು ಪರಿಸರಕ್ಕೆ ಅತ್ಯಂತ ಅಪಾಯಕಾರಿ. ಆ ಸಣ್ಣ ಪ್ಲಾಸ್ಟಿಕ್ ತುದಿ ಕವರ್ ಒಳಗಡೆಯೇ ಇರುವಂತೆ ಕೇವಲ ತೂತು ಮಾಡಿ ಹಾಲು ಸುರಿಯಬೇಕು. ಇಲ್ಲದಿದ್ದರೆ ಆ ಸಣ್ಣ ತುಣುಕುಗಳು ಕೊನೆಗೆ ಭೂಮಿ ಅಥವಾ ನೀರನ್ನು ಸೇರಿ ಪ್ರಕೃತಿಯನ್ನು ನಾಶಪಡಿಸುತ್ತವೆ ಎಂದರು.
ಭೂಮಿಯ ಮೇಲಿರುವ ಒಟ್ಟು ಅರಣ್ಯ ಸಂಪತ್ತಿನಲ್ಲಿ ಶೇಕಡಾ 70 ರಷ್ಟು ಸಮುದ್ರದ ಒಳಗಿದೆ. ಆಲ್ಗೆ, ಪ್ಲಾಂಕ್ಟನ್ ಮತ್ತು ಸಮುದ್ರದ ಕಳೆಗಳೇ ನಿಜವಾದ ಅರಣ್ಯಗಳಾಗಿವೆ. ನಾವು ವಾತಾವರಣಕ್ಕೆ ಬಿಡುತ್ತಿರುವ ಶೇ. 70 ರಿಂದ 80 ರಷ್ಟು ಮಾಲಿನ್ಯವನ್ನು ಹೀರಿಕೊಳ್ಳುವುದು ಇದೇ ಸಮುದ್ರ. ಆದರೆ ನಾವು ಸಮುದ್ರದ ಮೇಲ್ಮೈಯನ್ನು ಪ್ಲಾಸ್ಟಿಕ್ನಿಂದ ಮುಚ್ಚುತ್ತಿರುವುದರಿಂದ ಸೂರ್ಯನ ಕಿರಣಗಳು ಒಳಗಡೆ ಹೋಗಲು ಸಾಧ್ಯವಾಗದೆ ದ್ಯುತಿಸಂಶ್ಲೇಷಣೆ ಪ್ರಕ್ರಿಯೆಗೆ ಧಕ್ಕೆಯುಂಟಾಗಿ, ಜಲಚರಗಳ ಬದುಕಿಗೆ ಕುತ್ತು ಬಂದಿದೆ ಎಂದು ತಿಳಿಸಿದರು.
ಜಗತ್ತಿನ 7 ಬಿಲಿಯನ್ ಜನಸಂಖ್ಯೆಗೆ ಬಳಸುವ ಆಹಾರದ ಶೇಕಡಾ 30 ರಷ್ಟು ಸಮುದ್ರದಿಂದಲೇ ಬರುತ್ತದೆ. ಕರಾವಳಿ ಪ್ರದೇಶಗಳಲ್ಲಿ ಪ್ರಪಂಚದ ಶೇ. 50 ರಿಂದ 60 ರಷ್ಟು ಜನಸಂಖ್ಯೆ ವಾಸಿಸುತ್ತಿದ್ದು, ಅವರ ಮುಖ್ಯ ಆಹಾರ ಮೀನು ಮತ್ತು ಜಲಚರಗಳಾಗಿವೆ. ಸಮುದ್ರವನ್ನು ಕಲುಷಿತಗೊಳಿಸುವ ಮೂಲಕ ನಾವು ಅವರ ಆಹಾರವನ್ನೂ ಕಸಿದುಕೊಳ್ಳುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು. ಅರಣ್ಯ ಇಲಾಖೆಯ ವತಿಯಿಂದ ಈಗಾಗಲೇ 6,000ಕ್ಕೂ ಹೆಚ್ಚು ಸಸಿಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಂಗೇಗೌಡ ಅವರು ಮಾತನಾಡಿ, ಹಸಿರೇ ಉಸಿರು, ಹಸಿರಿಲ್ಲದೆ ಉಸಿರಿಲ್ಲ ಮತ್ತು ಪರಿಸರವಿಲ್ಲದೆ ನಾವಿಲ್ಲ. ಹೀಗಾಗಿ ನಾವೆಲ್ಲರೂ ಸೇರಿ ಪರಿಸರವನ್ನು ರಕ್ಷಿಸಬೇಕಾಗಿದೆ. ಕೈಗಾರಿಕಾ ವಲಯ ಹಾಗೂ ವಾಹನಗಳಿಂದ ಹೊರಹೊಮ್ಮುತ್ತಿರುವ ಕಲುಷಿತ ಹೊಗೆಯಿಂದಾಗಿ ಗ್ಲೋಬಲ್ ವಾರ್ಮಿಂಗ್ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ಧ್ರುವಗಳಲ್ಲಿ ಮಂಜುಗಡ್ಡೆ ಕರಗಿ, ಸಮುದ್ರದ ಮಟ್ಟ ನಿಧಾನವಾಗಿ ಏರುತ್ತಿದೆ. ಯಾವುದೇ ಒಂದು ಭಾಗದಲ್ಲಿ ಪರಿಸರಕ್ಕೆ ಹಾನಿಯಾದರೆ, ಅದರ ದುಷ್ಪರಿಣಾಮ ಮತ್ತೊಂದು ಭಾಗದ ಮೇಲೆಯೂ ಬೀರುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ತಂಪಾದ ವಾತಾವರಣಕ್ಕೆ ಹೆಸರಾಗಿದ್ದ ಊರುಗಳಲ್ಲೂ ಕಡು ಬೇಸಿಗೆ ಕಾಣಿಸಿಕೊಳ್ಳುತ್ತಿರುವುದು ಮತ್ತು ಅಕಾಲಿಕ ಮಳೆ, ಮೇಘಸ್ಫೋಟಗಳಾಗುತ್ತಿರುವುದು ಪರಿಸರ ಮೇಲಿನ ದೌರ್ಜನ್ಯಕ್ಕೆ ಸಾಕ್ಷಿಯಾಗಿದೆ. ಗಿಡ ನೆಡುವುದರಿಂದಷ್ಟೇ ಜವಾಬ್ದಾರಿ ಮುಗಿಯುವುದಿಲ್ಲ. ಆ ಗಿಡವು ಮರವಾಗುವವರೆಗೆ, ಅದನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಇಲ್ಲದಿದ್ದರೆ ವನಮಹೋತ್ಸವದ ಹೆಸರಿನಲ್ಲಿ ನೆಟ್ಟ ಗಿಡಗಳು ಒಣಗಿ ಹೋದವು ಎಂಬ ವರದಿಗಳನ್ನು ಮಾಧ್ಯಮಗಳಲ್ಲಿ ನೋಡಬೇಕಾಗುತ್ತದೆ ಎಂದ ಅವರು, ಸಾರ್ವಜನಿಕರು ತಮ್ಮ ಆಸುಪಾಸಿನಲ್ಲಿರುವ ಗಿಡಗಳನ್ನು ದತ್ತು ಪಡೆದು ಪೋಷಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಅವರು ಮಾತನಾಡಿ, ಜಾಗತಿಕ ತಾಪಮಾನ ಏರಿಕೆ, ಮಳೆ ಕೊರತೆ, ಸಮುದ್ರದ ನೀರಿನ ಮಟ್ಟ ಏರಿಕೆ ಹಾಗೂ ಕೃಷಿ ಕ್ಷೇತ್ರದಲ್ಲಿ ಕಾಡುತ್ತಿರುವ ಕೀಟಬಾಧೆಗಳಂತಹ ಸಮಸ್ಯೆಗಳು ಪರಿಸರ ವಿನಾಶದಿಂದಾಗಿ ಹೆಚ್ಚುತ್ತಿವೆ. ದೇಶದ ರಾಜಧಾನಿ ದೆಹಲಿಯಂತಹ ಮೆಟ್ರೋ ನಗರಗಳಲ್ಲಿ ಚಳಿಗಾಲದಲ್ಲಿ ಮಾಸ್ಕ್ ಧರಿಸಿಯೇ ಓಡಾಡಬೇಕಾದ ಪರಿಸ್ಥಿತಿ ಇದೆ. ಅಲ್ಲಿನ ಜನರ ಜೀವಿತಾವಧಿ ಇತರ ನಗರಗಳಿಗೆ ಹೋಲಿಸಿದರೆ ಐದು ವರ್ಷಗಳಷ್ಟು ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ನಮ್ಮ ನಗರಗಳಿಗೂ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ ಎಂದರು.
ಭಾರತದ ಸಂವಿಧಾನದ ಮೂಲಭೂತ ಕರ್ತವ್ಯಗಳ ಅಡಿಯಲ್ಲಿ ಪರಿಸರ, ಅರಣ್ಯ ಮತ್ತು ನದಿಗಳನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಅಷ್ಟೇ ಅಲ್ಲದೆ, ಸಂವಿಧಾನದ ವಿಧಿ 21ರ ಅಡಿಯಲ್ಲಿ ‘ಸ್ವಚ್ಛ ಪರಿಸರವನ್ನು ಹೊಂದುವುದು ಪ್ರತಿಯೊಬ್ಬನ ಮೂಲಭೂತ ಹಕ್ಕು’ ಎಂದು ಗೌರವಾನ್ವಿತ ಸುಪ್ರೀಂ ಕೋರ್ಟ್ ಸಹ ತನ್ನ ವಿವಿಧ ತೀರ್ಪುಗಳಲ್ಲಿ ಸ್ಪಷ್ಟಪಡಿಸಿದೆ. ನಮ್ಮ ನಾಡಗೀತೆಯಲ್ಲಿ ಕುವೆಂಪು ಅವರು ಕರ್ನಾಟಕದ ಪ್ರಕೃತಿ, ಅರಣ್ಯ ಮತ್ತು ನದಿಗಳ ಸೌಂದರ್ಯವನ್ನು ಅತ್ಯಂತ ಶ್ರೀಮಂತವಾಗಿ ವರ್ಣಿಸಿದ್ದಾರೆ. ಈ ನೈಸರ್ಗಿಕ ಸಂಪತ್ತನ್ನು ವಜ್ರದಂತೆ ಕಾಪಾಡಿಕೊಳ್ಳುವ ಹೊಣೆಗಾರಿಕೆ ನಮ್ಮದಾಗಿದೆ ಎಂದರು.
ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಏಕ್ ಪೇಡ್ ಮಾ ಕೆ ನಾಮ್” (ಒಂದು ಸಸಿ ತಾಯಿಯ ಹೆಸರಿನಲ್ಲಿ) ಅಭಿಯಾನದಡಿ, ಪ್ರತಿಯೊಬ್ಬರೂ ತಮ್ಮ ತಾಯಿಯ ಸವಿನೆನಪಿನಲ್ಲಿ ಸಸಿಗಳನ್ನು ನೆಟ್ಟು, ಅವುಗಳನ್ನು ಪೋಷಿಸಿ ಬೆಳೆಸುವ ಮೂಲಕ ಪರಿಸರ ಬದಲಾವಣೆಗೆ ಕೈಜೋಡಿಸಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಲೆಗಳಲ್ಲಿ ಏರ್ಪಡಿಸಿದ್ದ ಚರ್ಚಾಸ್ಪರ್ಧೆ, ಚಿತ್ರಕಲೆ ಮತ್ತು ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು ಮತ್ತು ಪ್ಲಾಸ್ಟಿಕ್ ಬದಲಾಗಿ ಬಳಸಲು ಬಟ್ಟೆ ಬ್ಯಾಗ್ಗಳನ್ನು ವಿತರಿಸಲಾಯಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ್, ಸಾಮಾಜಿಕ ಅರಣ್ಯ ಉಪ ಸಂರಕ್ಷಣಾಧಿಕಾರಿ ನವೀನ್, ಪರಿಸರ ಅಧಿಕಾರಿ ಶೈಲಜಾ, ಬಿಐಟಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಅರವಿಂದ್, ಕಾರ್ಯದರ್ಶಿ ದೇವೆಂದ್ರಪ್ಪ ಹಾಗೂ ಇತರರು ಉಪಸ್ಥಿತರಿದ್ದರು.


