ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಒಂದು ಕುಟುಂಬಕ್ಕಾಗಿ ಮುಸ್ಲಿಮರಿಗೆ ಅನ್ಯಾಯ ಮಾಡಿದೆ. ಆ ಕುಟುಂಬಕ್ಕಾಗಿ ಮುಸ್ಲಿಮರನ್ನು ಕೈ ಬಿಟ್ಟು , ಸಮುದಾಯದ ಮುಖಂಡರ ಮೇಲೆಯೇ ಶಿಸ್ತು ಕ್ರಮ ಕೈಗೊಳ್ಳುತ್ತಿದೆ. ಇದು ಸಹಜವಾಗಿಯೇ ನಮಗೆ ಅಸಮಾಧಾನ ಉಂಟು ಮಾಡಿದೆ. ನಮಗೆ ಕಾಂಗ್ರೆಸ್ ಕೈ ಬಿಟ್ಟರೂ ಬೇರು ಪಕ್ಷಗಳ ಆಯ್ಕೆಗಳಿವೆ ಎಂದು ಮುಸ್ಲಿಂ ಧಾರ್ಮಿಕ ಮುಖಂಡರು ಕಿಡಿಕಾರಿದರು.
ಜಬ್ಬಾರ್, ನಸೀರ್ ಅಹ್ಮದ್ ಅಮಾನತು ಖಂಡನೀಯ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಮೀಯತ್ ಉಲಮಾ ಕರ್ನಾಟಕದ ಅಧ್ಯಕ್ಷ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ, ಕಾಂಗ್ರೆಸ್ ಪಕ್ಷ ಮುಸ್ಲಿಂರಿಗೆ ಅನಗತ್ಯ ತೊಂದರೆ ನೀಡುವುದನ್ನು ನಿಲ್ಲಿಸಬೇಕು. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ಅವರ ವಜಾ ಮತ್ತು ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿರುವುದು ಖಂಡನೀಯ ಎಂದರು.
ದಾವಣಗೆರೆ: ಮರಕ್ಕೆ ಕಾರು ಡಿಕ್ಕಿ ಹೊಡೆದು ಪೊಲೀಸ್ ಇನ್ ಸ್ಪೆಕ್ಟರ್ ಸಾ*ವು
ಮುಸ್ಲಿಮರು ದೂರವಾದ್ರೆ ಕಾಂಗ್ರೆಸ್ ದುರ್ಬಲ
ಮುಸ್ಲಿಮರು ಕಾಂಗ್ರೆಸ್ ಪಕ್ಷದಿಂದ ದೂರವಾದರೆ ಕರ್ನಾಟಕದಲ್ಲಿಯೂ ಆ ಪಕ್ಷ ದುರ್ಬಲವಾಗುತ್ತದೆ. ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಪಕ್ಷದ ಪರಿಸ್ಥಿತಿ ನೋಡಬಹುದಾಗಿದೆ. ಮುಂದಿನ ನಡೆ ಬಗ್ಗೆ ಚರ್ಚಿಸಲು ಸಮುದಾಯದ ಸಭೆ ಕರೆಯುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಿದ್ದಕ್ಕೆ ಆಘಾತ
ಜುಲ್ಫಿಕಾರ್ ಅಹ್ಮದ್ ನೂರಿ ಮಾತನಾಡಿ, ದಾವಣಗೆರೆ ದಕ್ಷಿಣ ಮತ್ತು ಉತ್ತರ ಕ್ಷೇತ್ರದಲ್ಲಿ ನಮ್ಮ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಟಿಕೆಟ್ ನೀಡಿಲ್ಲ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಆದರೆ, ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗನ ಹೆಸರು ಘೋಷಿಸಿದಾಗ ನಮಗೆ ಆಘಾತ ಆಯ್ತು. ಎಂದು ಆಕ್ರೋಶ ವ್ಯಕ್ತಪಡಿಸಿದರು.
ತನ್ವೀರ್ ಪೀರಾನ್ ಹಾಶ್ಮಿ, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿಯೂ ಮುಸ್ಲಿಮರು ಕೊಡುಗೆ ನೀಡಿದ್ದಾರೆ. ಆದರೆ, ಸಮುದಾಯಕ್ಕೆ ನೀಡಿದ ಭರವಸೆಗಳನ್ನು ಮರೆತಿರುವ ಪಕ್ಷ, ಈಗ ಮುಸ್ಲಿಂ ವಿರೋಧಿ ಕ್ರಮಗಳನ್ನು ಕೈಗೊಳ್ಳುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಾರುಲ್ ಶಾ ವಸೀವುಲ್ಲಾ ಪ್ರಾಂಶುಪಾಲ ಮೊಹ್ಮದ್ ಜೈನುಲ್ ಅಬಿದ್ದೀನ್ ರಶಾದಿ ಮಜ್ಹರಿ, ವೆಲ್ಫೇರ್ ಆಫ್ ಹುಮ್ಯಾನಿಟಿ ಫೌಂಡೇಷನ್ ಅಧ್ಯಕ್ಷ ಶಬ್ಬೀರ್ ಅಹ್ಮದ್ ನದ್ವಿ ಉಪಸ್ಥಿತರಿದ್ದರು.



