ದಾವಣಗೆರೆ: ಕೃಷಿ ಇಲಾಖೆಯ ವತಿಯಿಂದ ಸಿರಿಧಾನ್ಯ (millet food) ಮತ್ತು ಸಾವಯವ ಅಂತರಾಷ್ಟ್ರೀಯ ವಾಣಿಜ್ಯ ಮೇಳ – 2026 ರ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ. ಜಿಯಾವುಲ್ಲಾ ತಿಳಿಸಿದ್ದಾರೆ.
10 ಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮ: ಶಿಕ್ಷಣ ಸಚಿವ
ಡಿಸೆಂಬರ್ 31 ರಂದು ಬೆಳಿಗ್ಗೆ 11.00 ಗಂಟೆಗೆ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ದಾವಣಗೆರೆ ಆವರಣದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಹಾಗೂ ಕೃಷಿ ಇಲಾಖೆಯ ಸಿಬ್ಬಂದಿಗಳನ್ನು ಹೊರತುಪಡಿಸಿ ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶವಿರುತ್ತದೆ.
ಮೂರು ವಿಭಾಗಗಳಲ್ಲಿ ಸ್ಪರ್ಧೆ
ಸಿರಿಧಾನ್ಯದ ಸಿಹಿ ಖಾದ್ಯಗಳು, ಸಿರಿಧಾನ್ಯದ ಖಾರದ ಖಾದ್ಯಗಳು ಹಾಗೂ ಮರೆತು ಹೋದ ಖಾದ್ಯಗಳು ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧಿಸಬಹುದಾಗಿದೆ. ಪ್ರತಿ ಸ್ಪರ್ಧಿಗೆ ಒಂದೇ ವಿಭಾಗದಲ್ಲಿ ಒಂದೇ ಸಸ್ಯಹಾರಿ ತಿನಿಸು/ಖಾದ್ಯದ ಸಿಹಿ, ಖಾರ ಮತ್ತು ದೇಶಿ ತಳಿಗಳಿಂದ ತಯಾರಿಸುವ ಖಾದ್ಯಗಳ ತಿನಿಸುಗಳನ್ನು ಮಾತ್ರ ಸ್ಪರ್ಧೆಗೆ ಸಲ್ಲಿಸಬಹುದು. ಮನೆಯಲ್ಲಿಯೇ ತಯಾರಿಸಿ ಸ್ಪರ್ಧೆಯಲ್ಲಿ ಪ್ರದರ್ಶಿಸಬೇಕು.
ಸಿಹಿ ಮತ್ತು ಖಾರದ ಖಾದ್ಯ ತಯಾರಿಸಕು ಅವಕಾಶ
ಸಿರಿಧಾನ್ಯಗಳಾದ ಜೋಳ, ರಾಗಿ, ನವಣೆ, ಸಜ್ಜೆ, ಹಾರಕ, ಬರಗು, ಊದಲು, ಕೊರಲೆ ಮತ್ತು ಸಾಮೆ ಬೆಳೆಗಳಿಂದ ಸಿಹಿ ಮತ್ತು ಖಾರದ ಖಾದ್ಯವನ್ನು ತಯಾರಿಸಬೇಕಿದೆ. ಮರೆತು ಹೋದ ಖಾದ್ಯಗಳನ್ನು ರೈತರ ಸಾಂಪ್ರದಾಯಿಕ, ಪರಂಪರೆ, ಜಾನಪದ ಪ್ರಭೇದಗಳು ಎಂದು ಕರೆಯಲ್ಪಡುವ, ದೇಸಿ ತಳಿಗಳಿಂದ (ಸಿರಿಧಾನ್ಯಗಳನ್ನು ಹೊರತು ಪಡಿಸಿ ಇತರೆ ದೇಸಿ ತಳಿಗಳಡಿ ಬರುವ ಆಹಾರ ಮತ್ತು ಎಣ್ಣೆಕಾಳು ಬೆಳೆಗಳ, ತರಕಾರಿ ಮತ್ತು ಹಣ್ಣುಗಳು ಇತ್ಯಾದಿ) ಖಾದ್ಯಗಳನ್ನು ತಯಾರಿಸುವುದು.
ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಇರುವವರು ದಿನಾಂಕ: 21-12-2025 ರೊಳಗೆ ತಮ್ಮ ಹೆಸರು, ವಿಳಾಸ, ಭಾಗವಹಿಸುವ ವಿಭಾಗ (ಸಿಹಿ, ಖಾರ, ಮರೆತು ಹೋದ ಖಾದ್ಯ) ವನ್ನು ಸಹಾಯಕ ಕೃಷಿ ನಿರ್ದೇಶಕರು (ರೈ.ಮ) ಮೊ: 8277928938 ಇವರಿಗೆ ಸಂಪರ್ಕಿಸಿ ಹೆಸರನ್ನು ನೋಂದಾಯಿಸಬೇಕು.
2024-25 ನೇ (ಹಿಂದಿನ) ಸಾಲಿನಲ್ಲಿ ಸಿರಿಧಾನ್ಯ ಪಾಕಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ ಮಟ್ಟದಲ್ಲಿ ಬಹುಮಾನ ಪಡೆದ ಸ್ಪರ್ಧಿಗಳಿಗೆ ಪ್ರಸ್ತುತ ವರ್ಷದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.
ತಮ್ಮ ಅರ್ಜಿಯಲ್ಲಿ ನಮೂದಿಸಿದ ತಿನಿಸುಗಳನ್ನು, ಮನೆಯಲ್ಲಿಯೇ ತಯಾರಿಸಬೇಕು. ಇದಕ್ಕೆ ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ಸಂಕ್ಷಿಪ್ತ ಮಾಹಿತಿಯೊಂದಿಗೆ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ದಾವಣಗೆರೆ ಆವರಣದಲ್ಲಿ ದಿನಾಂಕ: 31-12-2025 ರಂದು ಸರಿಯಾಗಿ ಬೆಳಿಗ್ಗೆ 11.00 ಗಂಟೆಗೆ ಪ್ರದರ್ಶಿಸಬೇಕು. ಬಳಸುವ ಸಾಮಗ್ರಿಗಳ ಮಾದರಿಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು.
ತಯಾರಿಸಿದ ತಿನಿಸುಗಳ ಪ್ರದರ್ಶನ, ಬಳಸಿದ ಸಾಮಗ್ರಿಗಳು, ರುಚಿ, ತೋರಿಕೆ/ಪ್ರದರ್ಶನ, ಸುವಾಸನೆ, ಪೌಷ್ಟಿಕತೆಗಳ ಮೇಲೆ ಅಂತಿಮ ತೀರ್ಪು ಕೈಗೊಳ್ಳಲಾಗುವುದು. ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ.
ಪ್ರಥಮ ಬಹುಮಾನ 5 ಸಾವಿರ
ಜಿಲ್ಲಾ ಮಟ್ಟದಲ್ಲಿ ಸಿಹಿ, ಖಾರ (ಸಿರಿಧಾನ್ಯ ಖಾಧ್ಯಗಳಿಗೆ ಮಾತ್ರ) ಮತ್ತು ಮರೆತು ಹೋದ ಖಾದ್ಯಗಳ ತಿನಿಸಿಗೆ ಪ್ರತ್ಯೇಕವಾಗಿ ಪ್ರಥಮ 5000 ರೂ., ದ್ವಿತೀಯ 3000 ರೂ. ಮತ್ತು ತೃತೀಯ 2000 ರೂ. ಗಳ ಬಹುಮಾನವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರು (ರೈ.ಮ) ಮೋ: 8277928938 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ ತಿಳಿಸಿದ್ದಾರೆ.



