ದಾವಣಗೆರೆ: ನಗರದ ಹೊರ ವಲಯದ ಹೆಬ್ಬಾಳು ಟೋಲ್ ಗೇಟ್ ಬಳಿ ವಾಹನ ತಪಾಸಣೆ ವೇಳೆ ಡಿಎಆರ್ ಕಾನ್ಸ್ಟೇಬಲ್ ರಾಮಪ್ಪ ಪೂಜಾರ್(27) ಮೃತಪಟ್ಟಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಇದಕ್ಕೆ ಎಸ್ಪಿ ಉಮಾ ಪ್ರಶಾಂತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮೃತರ ಕುಟುಂಬಸ್ಥರ ದುಖಃ ಕಾಮೆಂಟ್ ಮಾಡಿದವರಿಗೆ ಅರ್ಥವಾಗಿಲ್ಲ ಎಂದು ಕಿಡಿಕಾರಿದರು.
ಕೆಟ್ಟ ಕಾಮೆಂಟ್ ಮಾಡಿದವರ ವಿರುದ್ಧ ಕಾನೂನು ಕ್ರಮ
ಲಾರಿ ತಪಾಸಣೆ ಮಾಡಲು ಹೋದ ರಾಮಪ್ಪ ಪೂಜಾರ್ ಮೇಲೆ ಚಾಲಕ ಲಾರಿ ಹರಿಸಿ ಪರಾರಿಯಾಗಿದ್ದನು. ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಕಿಡಿಗೇಡಿಗಳು ಪೊಲೀಸ್ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಎಸ್ಪಿ ಉಮಾ ಪ್ರಶಾಂತ್, ‘ಒಬ್ಬರ ಸಾವನ್ನು ಸಂಭ್ರಮಿಸುವ ನಿಮ್ಮ ಮನಸ್ಥಿತಿಯನ್ನು ನೋಡಿದರೆ, ನಿಮ್ಮ ಗುಣಲಕ್ಷಣ ಏನೆಂದು ತಿಳಿಯುತ್ತದೆ. ಎಲ್ಲೋ ಕುಳಿತು ಪೊಲೀಸ್ ಇಲಾಖೆಯ ಬಗ್ಗೆ ಅಪಪ್ರಚಾರ ಮಾಡುವ ಬದಲು, ಏನಾದರೂ ದೂರು ಇದ್ದರೆ ಠಾಣೆಗೆ ಬಂದು ದೂರು ಸಲ್ಲಿಸಿ,’ ಎಂದು ಕಎಚ್ಚರಿಕೆ ನೀಡಿದ್ದಾರೆ. ಈ ಕಾಮೆಂಟ್ಗಳನ್ನು ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.
ಸಿಸಿಟಿವಿ ಇರಲಿಲ್ಲ ಎಂಬುದನ್ನು ಒಪ್ಪದ ಎಸ್ಪಿ
ಕ್ಯಾಂಟರ್ ಚಾಲಕ ವಾಹನವನ್ನು ಎಡಕ್ಕೆ ತೆಗೆದುಕೊಳ್ಳುವ ಬದಲು ಬಲಭಾಗಕ್ಕೆ ಬಂದಿದ್ದರಿಂದ ಕಾನ್ಸ್ ಸ್ಟೇಬಲ್ ಮೇಲೆ ಹರಿದು ಸಾವು ಸಂಭವಿಸಿದೆ. ಟೋಲ್ ಗೇಟ್ ಬಳಿ ಸಿಸಿಟಿವಿ ಇರಲಿಲ್ಲ ಎಂಬುದು ಖಡಾಖಂಡಿತವಾಗಿ ಒಪ್ಪಲ್ಲ. ಲೇನ್ ಡಿಸಿಪ್ಲಿನ್ ಪ್ರಾಜೆಕ್ಟ್ 2022 ರಿಂದ ಕಾರ್ಯ ನಿರ್ವಹಿಸುತ್ತಿದೆ ಮತ್ತು ಯೋಜನೆ ಅಡಿ 12 ಕೆಮೆರಾಗಳನ್ನು ಅಳವಡಿಸಲಾಗಿದೆ. ಲೇನ್ ಉಲ್ಲಂಘನೆಯಂಥ ಪ್ರಕರಣ ನಡೆದರೆ ಪಿಡಿಎಂಎಸ್ ಡಿವೈಸ್ಗಳಲ್ಲಿ ಅದು ಸೆರೆಯಾಗುತ್ತದೆ ಎಂದು ಹೇಳಿದರು.



