ಡಿವಿಜಿ ಸುದ್ದಿ, ದಾವಣಗೆರೆ: ಮಧ್ಯ ಕರ್ನಾಟಕ ದಾವಣಗೆರೆಯ ಚನ್ನಗಿರಿ ತಾಲ್ಲೂಕಿನ ಅಡಿಕೆ ಬೆಳೆಗಾರರ ಆಶಾ ಕಿರಣವಾಗಿರುವ ತೋಟ ಉತ್ಪನ್ನಗಳ ಮಾರಾಟ ಸಹಕಾರಿ ಸಂಘ(ತುಮ್ಕೋಸ್), ಅತ್ಯುತ್ತಮ ಸಹಕಾರ ಸಂಘವಾಗಿ ಮುನ್ನಡೆಯುತ್ತಿದೆ. ಸದಾ ಅಡಿಕೆ ಬೆಳಗಾರರ ಹಿತಕಾಯುವ ತುಮ್ಕೋಸ್ ರಾಜ್ಯದ ಯಶಸ್ವಿ ಸಹಕಾರಿ ಸಂಸ್ಥೆಗಳಲ್ಲೊಂದು. 24 ವರ್ಷಗಳ ಹಿಂದೆ ಜನ್ಮತಾಳಿದ ಈ ಸಂಸ್ಥೆ ಈಗ ಆಲದ ಮರವಾಗಿ ಬೆಳೆದು ಐದು ಜಿಲ್ಲೆಗಳಲ್ಲಿ 8 ಶಾಖಾ ಕಚೇರಿ ಹೊಂದಿದೆ.
ರೈತರಿಗೆ ಸಾಲ ಸೌಲಭ್ಯ ನೀಡುವುದು, ರೈತರ ಅಡಿಕೆ ಮಾರಾಟಕ್ಕೆ ಸಹಕಾರ…. ಹೀಗೆ ಅಡಿಕೆ ಬೆಳೆಗಾರರ ಹಿತ ಕಾಯುವ ತುಮ್ಕೋಸ್ ಚನ್ನಗಿರಿ ಅಡಿಕೆ ರೈತರ ಜೀವನಾಡಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಬ್ಯಾಂಕಿಗಿಂತಲೂ ಅತಿ ಸರಳವಾಗಿ ರೈತರಿಗೆ ಹಣಕಾಸಿನ ವ್ಯವಹಾರದಲ್ಲಿ ಆಪ್ತ ಒಡನಾಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಮೂಲಕ ಕೇಂದ್ರ ಸರ್ಕಾರದಿಂದ ನೀಡುವ `ಬೆಸ್ಟ್ ಸೊಸೈಟಿ ಇನ್ ದಿ ನೇಷನ್’ ಎಂದು ಹೆಗ್ಗಳಿಕೆ ತುಮ್ಕೋಸ್ ಪಾತ್ರವಾಗಿದೆ.
ಅಡಿಕೆ ನಾಡು ಚನ್ನಗಿರಿಗೆ ತುಮ್ಕೋಸ್ ಕಳಸಪ್ರಾಯದಂತಿದೆ. ತುಮ್ಕೋಸ್ ಯಶಸ್ಸಿನ ಪ್ರತಿ ಹೆಜ್ಜೆಯ ಹಿಂದೆ ಹಾಲಿ ಅಧ್ಯಕ್ಷ ಶಿವಕುಮಾರ್ ಇದ್ದಾರೆ. ಪ್ರತಿ ವರ್ಷ ಕೋಟಿಗಟ್ಟಲೇ ವ್ಯವಹಾರ ನಡೆಸುವ ಸಹಕಾರಿ ಸಂಸ್ಥೆ ರಾಜ್ಯಕ್ಕೆ ಮಾದರಿಯಾಗಿದೆ. ಪ್ರತಿವರ್ಷ 730 ಕೋಟಿ ವ್ಯವಹಾರ ನಡೆಸುವ ತುಮ್ಕೋಸ್ ಗುರಿ ಮೀರಿದ ಸಾಧನೆ ಮಾಡಿದೆ. ಸರಾಸರಿ1 ಕೋಟಿ ಲಾಭ ಗಳಿಸುವ ತುಮ್ಕೋಸ್, ಈ ವರ್ಷ 12 ಕೋಟಿ ಲಾಭ ಗಳಿಸಿದೆ.

ಹಾಲಿ ಅಧ್ಯಕ್ಷ ಶಿವಕುಮಾರ್ ಅವಧಿಯನ್ನು ಅಡಿಕೆ ಬೆಳೆಗಾರರು ಸುವರ್ಣ ಯುಗ ಅಂತಲೇ ರೈತರು ಕರೆಯುತ್ತಿದ್ದಾರೆ. 10 ವರ್ಷಗಳ ಆಡಳಿತಾವಧಿಯಲ್ಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಸದಾ ಅಡಿಕೆ ಬೆಳೆಗಾರರ ಬಗ್ಗೆ ಚಿಂತಿಸುವ ಹೊಸ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದಾರೆ ಎನ್ನುತ್ತಾರೆ ಇಲ್ಲಿನ ರೈತರು.

ಮುಂದಿನ ದಿನಗಳಲ್ಲಿ ತುಮ್ಕೋಸ್ ಆದಾಯವನ್ನು 25 ಕೋಟಿಗೆ ಹೆಚ್ಚಿಸುವ ಗುರಿ ಹೊಂದಿದ್ದೇವೆ. ಈಗಾಗಲೇ ರಾಷ್ಟ್ರ ಪ್ರಶಸ್ತಿ ಪಡೆದಿರುವ ತುಮ್ಕೋಸ್, ಒಂದು ಬ್ಯಾಂಕ್ ತೆರೆಯುವ ಯೋಜನೆ ರೂಪಿಸಲಾಗಿದೆ. ಇದಲ್ಲದೆ ಸೂಪರ್ ಮಾರ್ಕೆಟ್, ಆಸ್ಪತ್ರೆ, ವ್ಯವಸ್ಥಿತ ಶಾಲೆ ತೆರೆಯುವ ಯೋಜನೆ ಕೂಡ ಹಾಕಿಕೊಂಡಿದ್ದೇವೆ.
-ಶಿವಕುಮಾರ್, ಅಧ್ಯಕ್ಷ ತುಮ್ಕೋಸ್
ತುಮ್ಕೋಸ್ 15 ನಿರ್ದೇಶಕರ ಆಯ್ಕೆಗೆ ನಾಳೆ (ಫೆ.23) ರಂದು ಚುನಾವಣೆ ನಡೆಯಲಿದ್ದು, ಹಾಲಿ ಅಧ್ಯಕ್ಷ ಶಿವಕುಮಾರ್ ಬಣ ಹಾಗೂ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಬಣದ ನಡುವಿನ ಬಿಗ್ ಫೈಟ್ ಎಂದೇ ಬಿಂಬಿತವಾಗಿದೆ. ನಾಡಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ತುಮ್ಕೋಸ್ 15 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಹಾಲಿ ಅಧ್ಯಕ್ಷ ಶಿವಕುಮಾರ್ ಪುನರ್ ಆಯ್ಕೆ ಬಯಸಿದ್ದಾರೆ. ಚನ್ನಗಿರಿ ಶಾಸಕ ವಿರೂಪಾಕ್ಷಪ್ಪನವರ ಬೆಂಬಲಿಗರು ಪ್ರತಿಸ್ಪರ್ಧಿಯಾಗಿದ್ದು, ತುಮ್ಕೋಸ್ ನಲ್ಲಿ ಪಾಲಿಟಿಕ್ಸ್ ಎಂಟ್ರಿ ಕೊಟ್ಟಂತಾಗಿದೆ.




