ಡಿವಿಜಿ ಸುದ್ದಿ,ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಕ್ರಮವಾಗಿ 8 ಎಂಎಲ್ ಸಿಗಳನ್ನು ಸೃಷ್ಟಿಸಿ ಮೇಯರ್ ಚುನಾವಣೆ ನಡೆಸಲು ಮುಂದಾಗಿದೆ. ಅಕ್ರಮ ಮತದಾನಕ್ಕೆ ಕಡಿವಾಣ ಹಾಕಿ ಅರ್ಹ ಮತದಾರರಿಗೆ ಅವಕಾಶ ನೀಡಬೇಕು. ನ್ಯಾಯಯುತ ಚುನಾವಣೆ ನಡೆಸಿ, ಇಲ್ಲವೇ ಚುನಾವಣೆ ರದ್ದುಗೊಳಿಸಬೇಕೆಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್ , ದಾವಣಗೆರೆ ಮಹಾನಗರ ಪಾಲಿಕೆಯ ಒಟ್ಟು 45 ವಾರ್ಡ್ ಗಳಲ್ಲಿ ಕಾಂಗ್ರೆಸ್ ಪಕ್ಷ 22 ಸ್ಥಾನ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಹೊಂದಿದೆ. 45 ಪಾಲಿಕೆ ಸದಸ್ಯರ ಜತೆ ಸ್ಥಳೀಯ ನಿವಾಸಿಗಳಾದ ಸಂಸದರಾದ ಜಿ.ಎಂ ಸಿದ್ದೇಶ್ವರ್, ಶಾಸಕರಾದ ಶಾಮನೂರು ಶಿವಶಂಕರಪ್ಪ, ರವೀಂದ್ರನಾಥ್, ಎಂಎಲ್ ಸಿಗಳಾದ ಮೋಹನ್ ಕೊಂಡಜ್ಜಿ, ಅಬ್ದುಲ್ ಜಬ್ಬಾರ್ ಅವರನ್ನೊಳಗೊಂಡಂತೆ 50 ಅರ್ಹರು.
ರಾಜ್ಯ ಸರ್ಕಾರ ಅಕ್ರಮವಾಗಿ 8 ಎಂಎಲ್ಸಿಗಳನ್ನು ಸೃಷ್ಠಿಸಿ ಒಟ್ಟು 62 ಸದಸ್ಯರು ಮೇಯರ್ ಚುನಾವಣೆಗೆ ಅರ್ಹರೆಂದು ಘೋಷಿಸಿದೆ. ಬಿಜೆಪಿಯ ಈ ಎಂಟು ಸದಸ್ಯರು ಇತ್ತೀಚೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿಯೂ ಮತದಾನ ಮಾಡಿದ್ದಾರೆ. ಬಿಜೆಪಿ ದಾವಣಗೆರೆ ಪಾಲಿಕೆ ಅಧಿಕಾರ ಹಿಡಿಯಲು ಚುನಾವಣೆ ಅಕ್ರಮದಲ್ಲಿ ತೊಡಗಿದ್ದು, ಈ ಬಗ್ಗೆ ಚುನಾವಣಾ ಅಧಿಕಾರಿಗಳು ಮೇಯರ್ ಚುನಾವಣೆಗೆ ತಡೆ ನೀಡಬೇಕು. ಇಲ್ಲವೇ ಮುಂದೂಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಎ ನಾಗರಾಜು, ಮಂಜುನಾಥ್ ಗಡಿಗುಡಾಳ್, ಕೆ. ಚಮನ್ ಸಾಬ್, ಕಲ್ಲಹಳ್ಳಿ ನಾಗರಾಜು, ಚಾರ್ಲಿ ರಹಿಂಸಾಬ್, ಕಾಂಗ್ರೆಸ್ ಮುಖಂಡ ಅಯೂಬ್ ಪೈಲ್ವಾನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



