ದಾವಣಗೆರೆ: ಹೊನ್ನಾಳಿ, ನ್ಯಾಮತಿ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಕೋಟ್ಯಂತರ ಬೆಲೆ ಬಾಳುವ ಸುಮಾರು 70 ಎಕರೆ ಜಮೀನು ವಕ್ಫ್ ಬೋರ್ಡ್ಗೆ ಸೇರ್ಪಡೆಯಾಗಿದೆ. ಕೂಡಲೇ ವಕ್ಫ್ ಬೋರ್ಡ್ (Waqf Board Notice) ರೈತರಿಗೆ ನೀಡಿರುವ ನೋಟಿಸ್ ಹಿಂಪಡೆಯಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಗ್ರಹಿಸಿದರು.
ಹೊನ್ನಾಳಿ ತಾಲೂಕಿನ ಸುಂಕದಕಟ್ಟೆ ಗ್ರಾಮದ ಸರ್ವೆ ನಂಬರ್ 22ರಲ್ಲಿ 8 ಎಕರೆ 11 ಗುಂಟೆ ಜಮೀನು ವಕ್ಪ್ ಮಂಡಳಿ ಹೆಸರಿಗೆ ಸೇರಿದೆ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಅವರು, ಅಲ್ಲಿನ ರೈತರು ಹಾಗೂ ಗ್ರಾಮಸ್ಥರೊಂದಿಗೆ ಸಮಸ್ಯೆ ಕುರಿತು ಚರ್ಚಿಸಿದರು. ನಂತರ ಮಾತನಾಡಿ,ಈ ಹಿಂದೆ ತಾಲೂಕಿನಲ್ಲಿ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಅಲ್ಪಸಂಖ್ಯಾತ ಅಧಿಕಾರಿಗಳ ಹುನ್ನಾರದಿಂದ ಅವಳಿ ತಾಲೂಕುಗಳಲ್ಲಿನ ಹಲವಾರು ಜಮೀನುಗಳು ವಕ್ಫ್ ಬೋರ್ಡ್ ಗೆ ಸೇರಿಸಲಾಗಿದೆ. ಜಮೀನನ್ನು ಮಸೀದಿ ನಿರ್ಮಿಸಲು ವಶಕ್ಕೆ ಪಡೆಯಲು ಪೊಲೀಸ್ ಮತ್ತು ಸರ್ವೆಯರನ್ನು ಕರೆತಂದಿದ್ದರು. ಆಗ ಗ್ರಾಮಸ್ಥರಿಂದ ವಿಷಯ ತಿಳಿದು ಅಧಿಕಾರಿಗಳಿಗೆ ಹಿಂದಿರುಗುವಂತೆ ಸೂಚನೆ ನೀಡಿದ್ದೇನೆ ಎಂದರು.
ಇದೇ ರೀತಿ ತುಂಗಭದ್ರಾ ನದಿ ಸಮೀಪದಲ್ಲಿ ಕೂಡ 13 ಎಕರೆ ಹಾಗೂ ರಾಘವೇಂದ್ರ ಸ್ವಾಮಿ ಮಠದ ಸಮೀಪ 12 ಎಕರೆ ಭೂಮಿಯನ್ನು ಯಾರ ಗಮನಕ್ಕೂ ತಾರದೇ ವಕ್ಫ್ ಸಮಿತಿ ಹೆಸರಿಗೆ ಮಾಡಲಾಗಿದೆ ಎಂದು ಕಿಡಿಕಾರಿದರು. ಇಡೀ ದೇಶಕ್ಕೆ ಕಪ್ಪು ಚುಕ್ಕೆಯಾಗಿರುವ ವಕ್ಫ್ ಬೋರ್ಡ್ ಅನ್ನು ದೇಶದಾದ್ಯಂತ ರದ್ದುಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡುತ್ತೇನೆ ಎಂದರು.
ಬಿಜೆಪಿ ತಾಲೂಕು ಮಂಡಲದ ಅಧ್ಯಕ್ಷ ಜೆ.ಕೆ.ಸುರೇಶ್, ರೈತ ಸಂಘದ ಸುಂಕದಕಟ್ಟೆ ಕರಿಬಸಪ್ಪ, ಗ್ರಾ.ಪಂ., ಅಧ್ಯಕ್ಷ ಶ್ರೀನಾಥ್, ಸದಸ್ಯಎಸ್.ಆರ್.ಮಂಜಪ್ಪ, ಎಸ್.ಎಚ್. ಮಂಜುನಾಥ್, ಎಸ್.ಕೆ. ಕರಿಬಸಪ್ಪ, ಬೂತ್ ಅಧ್ಯಕ್ಷ ಎಸ್.ಜಿ.ಮಂಜುನಾಥ್, ಎ.ಕೆ. ರುದ್ರಪ್ಪ, ಗ್ರಾಮಸ್ಥರು ಇದ್ದರು.



