ದಾವಣಗೆರೆ: ತಮ್ಮ ಮನೆಯಲ್ಲಿನ ಚಿನ್ನ, ನಗದು ಕದ್ದು, ಪೊಲೀಸ್ ಠಾಣೆಯಲ್ಲಿ ಕಳ್ಳನ ದೂರು ದಾಖಲಿಸಿದ್ದ ಯುವತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪರಿಚಯಸ್ಥ ವ್ಯಕ್ತಿ ಸಹಾಯದಿಂದ ತಮ್ಮ ಮನೆಯಲ್ಲಿಯೇ ಯಾರು ಇಲ್ಲದ ಸಮಯದಲ್ಲಿ 10.77 ಲಕ್ಷ ರೂ ಮೌಲ್ಯದ ಚಿನ್ನ ಹಾಗೂ 1.20 ಲಕ್ಷ ರೂ ನಗದು ಕಳವು ಮಾಡಿ ಕಳ್ಳತನದ ನಾಟಕವಾಡಿದ್ದ ಯುವತಿ ಸೇರಿದಂತೆ ಇನೊಬ್ಬನನ್ನು ಚನ್ನಗಿರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಚನ್ನಗಿರಿ ತಾಲೂಕು ಅಗರಬನ್ನಿಹಟ್ಟಿ ಗ್ರಾಮದ ತಸ್ಮಯ ಖಾನಂ(26), ಶಿವಮೊಗ್ಗದ ಇಲಿಯಾಜ್ ನಗರ ಮೂಲದ ಹಾಲಿ ಬೆಂಗಳೂರು ರಾಜಾಜಿನಗರ ನಿವಾಸಿ ಮುಜೀಬುಲ್ಲಾ ಶೇಖ್ (42) ಬಂಧಿತ ಆರೋಪಿಗಳು. ಕಳೆದ ಸೆ.30ರಂದು ಮಧ್ಯಾಹ್ನ ಅಗರಬನ್ನಿಹಟ್ಟಿ ಗ್ರಾಮದ ತನ್ನ ಮನೆಯಲ್ಲಿ ಒಬ್ಬಳೇ ಇದ್ದಾಗ ಯಾರೋ ಮನೆಯ ಒಳಗೆ ಬಂದು ಮುಖಕ್ಕೆ ಬಾಯಿಂದ ಊದಿ,
ತದನಂತರ ನೀರಿನಂತ ದ್ರವದಿಂದ ಚಿಮಿಕಿಸಿ ಪ್ರಜ್ಞೆ ತಪ್ಪಿಸಿ, ಮನೆಯ ಬೀರುವಿನಲ್ಲಿದ್ದ ಸುಮಾರು 170 ಗ್ರಾಂ ಚಿನ್ನಾಭರಣ, 1.20 ಲಕ್ಷ ರೂ. ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ತಮ್ಮಿಯ ಖಾನಂ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.
ಸ್ಥಳಕ್ಕೆ ಭೇಟಿ ನೀಡಿದ್ದ ಎಸ್ಪಿ ಉಮಾ ಪ್ರಶಾಂತ್ ಸ್ಥಳ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗಾಗಿ ನಿರ್ದೇಶನ ನೀಡಿದ್ದರು. ಎಎಸ್ಪಿಗಳಾದ ಅಧೀಕ್ಷಕ ವಿಜಯಕುಮಾರ್ ಸಂತೋಷ್ ಮತ್ತು ಜಿ. ಮಂಜುನಾಥ್ ಹಾಗೂ ಚನ್ನಗಿರಿ ಪೊಲೀಸ್ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗಿಸ್
ಮಾರ್ಗದರ್ಶನದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಬಾಲಚಂದ್ರನಾಯ್ಕ ನೇತೃತ್ವದಲ್ಲಿ ಪಿ.ಎಸ್.ಐಗಳಾದ ಸುರೇಶ್, ಜಗದೀಶ್ ಹಾಗೂ ಸಿಬ್ಬಂದಿಗಳಾದ ಶಶಿಧರ್, ವೀರಭದ್ರಪ್ಪ, ರುದ್ರೇಶ್, ಶ್ರೀನಿವಾಸ್, ರಮೇಶ್, ಗೀತಾಬಾಯಿ, ಹಾಲಮ್ಮ ಇವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ದೂರು ನೀಡಿದ್ದ ತಸ್ಮಯಖಾನಂ ಇನ್ನೊಬ್ಬ ವ್ಯಕ್ತಿಯೊಂದಿಗೆ
ಸೇರಿಕೊಂಡು ಕೃತ್ಯ ಎಸಗಿರುವುದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಯುವತಿಯನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ತಮ್ಮ ಕುಟುಂಬಕ್ಕೆ ನಿಕಟವರ್ತಿಯಾಗಿದ್ದ ಮುಜೀಬುಲ್ಲಾ ಶೇಖ್ ಅಲಿಯಾಸ್ ಜಾಕೀರ್ ಸೇರಿಕೊಂಡು ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಳು. ಇದು ಯಾರಿಗೂ ಗೊತ್ತಾಗಬಾರದು ಎನ್ನುವ ಕಾರಣಕ್ಕೆ ಯಾರೋ ಬಂದು ದ್ರವಣ ಸಿಂಪಡಿಸಿ ಪ್ರಜ್ಞೆ ತಪ್ಪಿ ಚಿನ್ನ ದೋಚಿದ್ದರು ಎಂದು ನಾಟಕವಾಡಿದ್ದಳು. ಕಳ್ಳತನ ಮಾಡಿದ್ದ ಬಂಗಾರ ಮತ್ತು ನಗದುcಹಣವನ್ನು ಆರೋಪಿ ಮುಜೀಬುಲ್ಲಾ ಶೇಖ್ ಶಿಮೊಗ್ಗದ ತನ್ನ ಮನೆಯಲ್ಲಿಟ್ಟಿರುವ ಬಗ್ಗೆ ಒಪ್ಪಿಕೊಂಡಿದ್ದು, ಮನೆಯಲ್ಲಿಟ್ಟಿದ್ದ 9.5 ಬೆಲೆ ಬಾಳುವ 155 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು ಒಟ್ಟು 1,27,000 ರೂ ನಗದು ಹಣವನ್ನು ವಶಪಡಿಸಿಕೊಂಡು, ಇಬ್ಬರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.



