ದಾವಣಗೆರೆ: ಭದ್ರಾ ಜಲಾಶಯದಿಂದ ನೀರು ಸೋರಿಕೆ ತಡೆಗೆ ಶಾಶ್ವತ ಕ್ರಮ ಹಾಗೂ ಅಚ್ಚುಕಟ್ಟು ನಾಲೆಗಳ ಆಧುನೀಕರಕ್ಕೆ ಆಗ್ರಹಿಸಿ ಜು. 24ರಂದು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ರೈತರು ತೀರ್ಮಾನಿಸಿದ್ದಾರೆ. ಇದಲ್ಲದೆ, ಜಲಾಶಯ ನೀರಿನ ಮಟ್ಟ 170 ಅಡಿ ತಲುಪಿದ ತಕ್ಷಣ ನೀರಾವರಿ ಸಲಹಾ ಸಮಿತಿ ಸಭೆ ಕರೆದು ನಾಲೆಗಳಿಗೆ ನೀರು ಹರಿಸುವ ವೇಳಾಪಟ್ಟಿ ಸಿದ್ಧಪಡಿಸಬೇಕೆಂದು ಇದೇ ವೇಳೆ ಜಿಲ್ಲಾ ರೈತ ಒಕ್ಕೂಟ ಆಗ್ರಹಿಸಿದೆ.
ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಅಧ್ಯಕ್ಷತೆಯಲ್ಲಿ ಒಕ್ಕೂಟದ ಸಭೆಯಲ್ಲಿ ಈ ತೀರ್ಮಾನಕ್ಕೆ ಕೈಗೊಳ್ಳಲಾಯಿತು. ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಭದ್ರಾ ಜಲಾಶಯದಿಂದ ನೀರು ಸೋರಿಕೆ ತಡೆಗೆ ಶಾಶ್ವತ ಕ್ರಮ ನಾಲೆಗಳ ಆಧುನೀಕರಕ್ಕೆ ಒತ್ತಾಯಿಸಿ ಜು.24ರಂದು ಬೆಳಿಗ್ಗೆ 11ಕ್ಕೆ ಬಾಡಾ ಕ್ರಾಸ್ ಬಳಿ ಜಮಾಯಿಸಿ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ತಡೆಯಲಾಗುವುದು ಎಂದು ತಿಳಿಸಿದರು.
ಜಲಾಶಯಕ್ಕೆ ನಾವು ಭೇಟಿ ನೀಡಿದ್ದಾಗ 100 ಅಡಿ ಆಳದಲ್ಲಿ ಬಿರುಕು ಕಾಣಿಸಿಕೊಂಡಿರುವುದು ಗೊತ್ತಾಗಿದೆ. ನಿರ್ಲಕ್ಷ್ಯ ವಹಿಸಿದ್ರೆ ಮುಂದೆ ಅಪಾಯವಾಗಲಿದೆ. ಸರ್ಕಾರ ಇದಕ್ಕೆ 150 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ನಾಲೆಗಳ ದುರಸ್ತಿ ಕಾರ್ಯ 2009ರಿಂದ ನಡೆದಿಲ್ಲ. ನಾಲೆಯಲ್ಲಿ ಹೂಳು ತುಂಬಿದ್ದು, ಕಳೆ ಗಿಡಗಳು ಬೆಳೆದಿವೆ. ತೂಬುಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.ಹೀಗಾಗಿ ನಾಲೆಗಳ ಆಧುನೀಕರಣ ಮಾಡಬೇಕೆಂದರು.
ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಮಾತನಾಡಿ, ಜಲಾಶಯದಿಂದ ಪ್ರತಿ ಬೆಳೆಗೆ 31 ಟಿಎಂಸಿ ಅಡಿ ನೀರಿನ ಅಗತ್ಯವಿದೆ. ಮುಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆಗೆ ಅಗತ್ಯ ಇರುವಷ್ಟು ನೀರು ಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿದೆ. ಅಧಿಕಾರಿಗಳು ಸಮರ್ಪಕವಾಗಿ ಮಾಡಬೇಕು. ನೀರು ದುರುಪಯೋಗ ಆಗಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಭದ್ರಾ ನಾಲೆ ಹಾಗೂ ಜಲಾಶಯ ಉಳಿಸಿಕೊಳ್ಳದಿದ್ದರೆ ಮುಂದಿನ ಪೀಳಿಗೆ ಕ್ಷಮಿಸಲಾರದು. 15 ಸದಸ್ಯರ ಸಮಿತಿ ರಚಿಸಿದರೆ ಹೋರಾಟದ ರೂಪುರೇಷ ಸಿದ್ಧಪಡಿಸಲು ಸೂಚಿಸಿದರ.
ರೈತ ಮುಖಂಡ ತೇಜಸ್ವಿ ಪಟೇಲ್, ಭದ್ರಾ ಜಲಾಶಯದ ರಕ್ಷಣೆ ಹಾಗೂ ನಾಲೆಗಳ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡನ್ನೂ ಪ್ರಶ್ನಿಸುವ ಅಗತ್ಯವಿದೆ. ರೈತರ ಹಿತದೃಷ್ಟಿಯಿಂದ ಹೋರಾಟ ನಡೆಯಬೇಕು. ಇದು ರಾಜಕೀಯ ಉದ್ದೇಶವಾಗಬಾರದು. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ನೀಡುವುದಾಗಿ ಕೇಂದ್ರ ಸರ್ಕಾರ ಬಜೆಟ್ನಲ್ಲಿ ಘೋಷಿಸಿತ್ತು. ಈ ಅನುದಾನ ಸಿಕ್ಕಿದ್ದರೆ ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ನೀರು ಬರುತ್ತಿತ್ತು. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಯ ರೈತರು ಒಟ್ಟಾಗಿ ಹೋರಾಟ ಮಾಡಬೇಕಿದೆ ಎಂದರು.
ಮಾಜಿ ಶಾಸಕ ಬಸವರಾಜ ನಾಯ್ಕ,ಬಿಜೆಪಿ ರೈತ ಮೋರ್ಚಾಭದ್ರಾ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ,ರೈತ ಮುಖಂಡ ನಾಗೇಶ್ವರರಾವ್, ಬಿಜೆಪಿ ಮುಖಂಡ ಕೊಳೇನಹಳ್ಳಿ ಬಿ.ಎಂ.ಸತೀಶ್, ಚಂದ್ರಶೇಖರ ಪೂಜಾರ ಸೇರಿ ಇತರರಿದ್ದರು.



