ಡಿವಿಜಿ ಸುದ್ದಿ, ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಅತೃಪ್ತರಾಗಿ ರಾಜೀನಾಮೆ ಕೊಟ್ಟು, ಉಪ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ 11 ನೂತನ ಶಾಸಕರಲ್ಲಿ 10 ಶಾಸಕರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಎರಡನೇ ಹಂತದ ಸಂಪುಟ ವಿಸ್ತರಣೆ ಇಂದು ರಾಜಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯ್ ವಾಲಾ ಅವರು ನೂತನ ಸಚಿವರಿಗೆ ಪ್ರತಿಜ್ಞಾ ವಿಧಿ ಭೋಧಿಸಿದರು.
ಹಿಂದಿನ ಮೈತ್ರಿ ಸರ್ಕಾರದಲ್ಲಿ ಸ್ಪೀಕರ್ ಅವರಿಂದ ಅನರ್ಹಗೊಂಡಿದ್ದ ಶಾಸಕರು, ಉಪ ಚುನಾವಣೆಯಲ್ಲಿ ಗೆದ್ದು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟಕ್ಕೆ ಸೇರ್ಪಡೆಯಾದ ಹೊಸ ಸಚಿವರ ಪಟ್ಟಿ ಇಲ್ಲಿದೆ ನೋಡಿ…
- ಯಶವಂತಪುರದ ಎಸ್.ಟಿ.ಸೋಮಶೇಖರ್
2. ಗೋಕಾಕದ ರಮೇಶ್ ಜಾರಕಿಹೊಳಿ
3. ಹೊಸಪೇಟೆಯ ಆನಂದ ಸಿಂಗ್
4. ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್
5. ಕೆ.ಆರ್.ಪುರದ ಭೈರತಿ ಬಸವರಾಜ
6. ಯಲ್ಲಾಪುರದ ಶಿವರಾಮ ಹೆಬ್ಬಾರ್
7. ಹಿರೇಕೆರೂರಿನ ಬಿ.ಸಿ. ಪಾಟೀಲ್
8. ಮಹಾಲಕ್ಷ್ಮಿ ಲೇಔಟ್ನ ಕೆ.ಗೋಪಾಲಯ್ಯ
9. ಕೆ.ಆರ್.ಪೇಟೆಯ ನಾರಾಯಣ ಗೌಡ
10. ಕಾಗವಾಡದ ಶ್ರೀಮಂತ ಪಾಟೀಲ್
ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಹುಣಸೂರಿನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎಚ್.ವಿಶ್ವನಾಥ್, ಅಥಣಿ ಕ್ಷೇತ್ರದ ಮಹೇಶ್ ಕುಮಟಳ್ಳಿ, ಮಸ್ಕಿ ಕ್ಷೇತ್ರದ ಪ್ರತಾಪ ಗೌಡ ಪಾಟೀಲ, ರಾಜರಾಜೇಶ್ವರಿ ನಗರದ ಮುನಿರತ್ನ, ರಾಣೆಬೆನ್ನೂರಿನ ಪಕ್ಷೇತರ ಶಾಸಕ ಆರ್.ಶಂಕರ್, ಸಚಿವ ಮತ್ತು ಶಾಸಕ ಸ್ಥಾನಕ್ಕ ರಾಜೀನಾಮೆ ನೀಡಿದ್ದ ಹೊಸಪೇಟೆಯ ಎಂ.ಟಿ.ಬಿ.ನಾಗರಾಜ್ ಅವರು ಸಚಿವ ಸ್ಥಾನ ಭಾಗ್ಯ ಲಭ್ಯವಾಗಿಲ್ಲ.
ಹುಣಸೂರಿನಲ್ಲಿ ವಿಶ್ವನಾಥ್, ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್, ಶಿವಾಜಿನಗರದಲ್ಲಿ ರೋಷನ್ ಬೇಗ್ ಬದಲಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶರವಣ ಅವರು ಉಪಚುನಾವಣೆಯಲ್ಲಿ ಸೋತಿದ್ದರು. ಇನ್ನು ಮುನಿರತ್ನ ಹಾಗೂ ಪ್ರತಾಪಗೌಡ ಪಾಟೀಲ್ ಕ್ಷೇತ್ರ ಆಯ್ಕೆ ಪ್ರಕರಣ ಕೋರ್ಟ್ ನಲ್ಲಿ ಇರುವುದರಿಂದ ಇನ್ನು ಚುನಾವಣೆ ನಡೆದಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿದ್ದ ಆರ್.ಶಂಕರ್ ಬಿಜೆಪಿಯಿಂದ ಸ್ಪರ್ಥೆ ಮಾಡಿರಲಿಲ್ಲ. ಇಲ್ಲಿ ಅರುಣ್ ಪೂಜಾರ್ ಸ್ಪರ್ಧೆ ಮಾಡಿ ಜಯ ಗಳಿಸಿದ್ದರು. ಇದೀಗ ಸೋತಿರುವ ಎಚ್. ವಿಶ್ವನಾಥ್ , ಎಂ.ಟಿ.ಬಿ. ನಾಗರಾಜ್ ಜೊತೆ ಆರ್ . ಶಂಕರ್ ಅವರನ್ನು ಎಂಎಲ್ ಸಿ ಮಾಡಿ ಮಂತ್ರಿ ಮಾಡುವ ಸವಾಲು ಬಿ.ಎಸ್. ಯಡಿಯೂರಪ್ಪ ಮೇಲಿದೆ.



