ದಾವಣಗೆರೆ: ಮಲೆನಾಡಿನ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂಗಾರು ಮಳೆ ಸಂಪೂರ್ಣ ತಗ್ಗಿದೆ. ಹೀಗಾಗಿ ಭದ್ರಾ ಜಲಾಶಯದ ಒಳ ಹರಿವು ನಿರೀಕ್ಷಿತ ಮಟ್ಟದಲ್ಲಿ ಏರಿಕೆಯಾಗುತ್ತಿಲ್ಲ. ಇಂದರಿಂದ ಅಚ್ಚುಕಟ್ಟು ವ್ಯಾಪ್ತಿಯ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ ರೈತರ ಆತಂಕ್ಕೆ ಕಾರಣವಾಗಿದೆ.
ಕಳೆದ ವರ್ಷದ ತೀವ್ರ ಬರದಿಂದ 68 ವರ್ಷದಲ್ಲಿಯೇ ಕಡಿಮೆ ನೀರು ಸಂಗ್ರಹವಾಗಿದ್ದ ಭದ್ರಾ ಜಲಾಯಶ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆ ಮತ್ತು ಮುಂಗಾರು ಮಳೆಯ ಉತ್ತಮ ಆರಂಭ ಪಡೆದಿತ್ತು. ಆದರೆ, ಕಳೆದ 15 ದಿನದಿಂದ ಮಳೆ ಸಂಪೂರ್ಣ ತಗ್ಗಿದ್ದು, ರೈತ ನಿರೀಕ್ಷೆ ಹುಸಿಯಾಗಿದೆ.
ಭದ್ರಾವತಿಯ ಲಕ್ಕವಳ್ಳಿಯ ಭದ್ರಾ ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ ಇದ್ದು, ಜೂ.22ರಂದು ನೀರಿನ ಮಟ್ಟ 119.3 ಅಡಿಯಷ್ಟಿದೆ. ಒಳ ಹರಿವು 446 ಕ್ಯೂಸೆಕ್ ನಷ್ಟಿದೆ. ಒಳ ಹರಿವು ಕಡಿಮೆ ಇರುವುದರಿಂದ ನೀರಿನ ಮಟ್ಟ ಏರಿಕೆಯಾಗುತ್ತಿಲ್ಲ. ಭದ್ರಾ ಡ್ಯಾಂ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗೆ ನೀರು ಮೂಲವಾಗಿದೆ.
- ಭದ್ರಾ ಜಲಾಶಯ ನೀರಿನ ವಿವರ
- ಗರಿಷ್ಠ : 186 ಅಡಿ
- ಇಂದಿನ ಮಟ್ಟ: 119.3 ಅಡಿ
- ಒಳ ಹರಿವು : 875 ಕ್ಯೂಸೆಕ್
- ಹೊರ ಹರಿವು : 343 ಕ್ಯೂಸೆಕ್
- ಕಳೆದ ವರ್ಷ ಈ ದಿನದ ನೀರಿನ ಮಟ್ಟ: 137.1 ಅಡಿ



