ದಾವಣಗೆರೆ: ಧರ್ಮ ನಮಗೋಸ್ಕರ ಇರಬೇಕೇ ಹೊರತು, ನಾವು ಧರ್ಮಕ್ಕೊಸ್ಕರ ಇರಬಾರದು. ಆದರೆ, ಕೆಲ ಪಟ್ಟಭದ್ರಾ ಹಿತಾಸಕ್ತಿಗಳು, ಇಂದು ಧರ್ಮ ಎತ್ತಿಕಟ್ಟುವ ಕೆಲಸ ನಡೆಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ದಾವಣಗೆರೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮೀಸಲಾತಿ ಭಿಕ್ಷೆ ಅಲ್ಲ, ಅದು ನಿಮ್ಮ ಹಕ್ಕು. ವಾಲ್ಮೀಕಿ ಸಮುದಾಯಕ್ಕೆ ಶೇ.7ರಷ್ಟು ಮೀಸಲಾತಿ ಸಿಕ್ಕಿದೆ ಎಂದ್ರೆ, ಅದು, ವಾಲ್ಮೀಕಿ ಶ್ರೀಗಳ ಹೋರಾಟಕ್ಕೆ ಸಿಕ್ಕ ಗೆಲುವಾಗಿದೆ ಎಂದರು.
ದೇಶದಲ್ಲಿ ಪರಿಶಿಷ್ಟ ಜಾತಿ, ಪಂಗಡದವರ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿಗೆ ಹಣ ಮೀಸಲಿಡಬೇಕು. ಈಗಾಗಲೇ ರಾಜ್ಯದಲ್ಲಿ ಜಾರಿ ಮಾಡಿದ್ದೇವೆ.ಇದು ದೇಶಾದ್ಯಂತ ಜಾರಿಯಾಗಬೇಕು.ಶೀಘ್ರದಲ್ಲಿ ಎಸ್ಸಿ ಎಸ್ಟಿ ಬ್ಯಾಕ್ ಲಾಗ್ ಗಳನ್ನು ಹುದ್ದೆ ತುಂಬುವಂತೆ ನಾನು ಆದೇಶಿಸಿದ್ಧೇನೆ. ಜನಸಂಖ್ಯೆಗನುಗುಣವಾಗಿ ಎಲ್ಲ ಸವಲತ್ತುಗಳು ಸಿಗಲು ನಮ್ಮ ಸರ್ಕಾರ ಬದ್ಧವಾಗಿದೆ.
ರಾಮಾಯಣದಂತಹ ಬೃಹತ್ ಗ್ರಂಥ ಬರೆದವರು ವಾಲ್ಮೀಕಿ ಋಷಿಗಳು. ಮಹಾನ್ ಗ್ರಂಥ ಬರೆಯುವ ಶಕ್ತಿ ಕೆಲವೇ ಜನರಿಗೆ ಸೀಮಿತವಾದುದಲ್ಲ, ಸಂವಿಧಾನ, ಕಾವ್ಯಶಕ್ತಿಯನ್ನು ಶೂದ್ರರು ಬರೆಯಬಹುದು ಎಂಬುದಕ್ಕೆ ಇವೆರೆಡು ಉದಾಹರಣೆಯಾಗಿದೆ. ಇವತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆ ರಾಮಾಯಣ ಕಾಲದಲ್ಲಿ ಇತ್ತು.ಸಮಾಜ ಸರ್ವ ಜನಾಂಗದ ಶಾಂತಿಯ ತೋಟದಂತೆ ಇರಬೇಕು ಎಂದರು.
ನಾವೆಲ್ಲರೂ ಸಂವಿಧಾನವನ್ನು ಅರ್ಥಮಾಡಿಕೊಂಡು ಅದರ ಆಶಯದಂತೆ ನಡೆದುಕೊಳ್ಳಬೇಕು. ಸಂವಿಧಾನದ ಧೇಯೋದ್ದೇಶಗಳನ್ನು ಜಾರಿಗೊಳಿಸುವುದು ನಮ್ಮ ಉದ್ದೇಶ. ಅದಕ್ಕಾಗಿ ಸಂವಿಧಾನದಲ್ಲಿ ಸಹಿಷ್ಣುತೆ ಸಹಬಾಳ್ವೆಯನ್ನು ಕಾಣಿಸಿದ್ದಾರೆ. ಹಿಂದೆ ಎಲ್ಲಾ ಶೂದ್ರ ವರ್ಗ ಅವಕಾಶಗಳಿಂದ ವಂಚಿತವಾಗಿತ್ತು. ಅಕ್ಷರಶಃ ಸಂಸ್ಕೃತಿಯಿಂದ ಶೂದ್ರರು ವಂಚಿರಾಗಿದ್ರು. ಜಾತಿವ್ಯವಸ್ಥೆಯ ಪರಿಣಾಮದಿಂದಲೇ ನಾವು ಶೂದ್ರರಾಗಿದ್ದೇವೆ. ವಿದ್ಯೆಯಿಂದ ವಂಚಿತವಾದ ಕಾರಣ ನಾವೆಲ್ಲರು ಹಿಂದುಳಿಯಬೇಕಾಯಿತು. ಮುಂದೆ ನಿಮ್ಮ ಮಕ್ಕಳು ಭವಿಷ್ಯದಲ್ಲಿ ಯಾವುದೇ ಕಾರಣಕ್ಕೂ ವಂಚಿತರಾಗಬಾರದು. ಬುದ್ಧಿ ಮತ್ತು ಜ್ಞಾನ ಪಡೆದುಕೊಂಡಾಗ ಮಾತ್ರ ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕಬಹುದು ಎಂದರು.



