ದಾವಣಗೆರೆ: ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧಿವೇಶನ ಬಗ್ಗೆ ಹಗುರವಾಗಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಹಾಸಭಾ ಕಿಡಿಕಾರಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾ ಸಭಾದ ಪ್ರಧಾನ ಕಾರ್ಯದರ್ಶಿ ಬಿ.ಜೆ. ರಮೇಶ್, ಮಹಾ ಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಾರ್ಗದರ್ಶನದಲ್ಲಿ 24ನೇ ಅಧಿವೇಶನ ಯಶಸ್ವಿಯಾಗಿದೆ. ಅವರು ಸಮಾಜದ ಎಲ್ಲಾ ಮಠಧೀಶರನ್ನು ಒಗ್ಗೂಡಿಸುವಲ್ಲಿ ಸಫಲರಾಗಿದ್ದಾರೆ. ಯತ್ನಾಳ್ ಅವರಿಗೆ ಸ್ವಪಕ್ಷದವರ ಮೇಲೂ ಪ್ರೀತಿ ಇಲ್ಲ, ಆಡಳಿತ ಪಕ್ಷದವರ ಮೇಲೂ ಪ್ರೀತಿ ಇಲ್ಲ. ಸ್ವಜಾತಿ ನಾಯಕರ ಮೇಲೂ ಅವರಿಗೆ ವಿಶ್ವಾಸ ಇಲ್ಲ. ಈ ಸಂದರ್ಭದಲ್ಲಿ ಮಹಾಸಭಾ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ.
ಯತ್ನಾಳ್ ಅವರು ಮಹಾ ಅಧಿವೇಶನ ಬಗ್ಗೆ ಬಾಯಿಗೆ ಬಂದ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ಶಾಸಕರಾಗಿ ಯಾವ ರೀತಿ ಮಾತನಾಡಬೇಕೆಂಬ ಪ್ರಜ್ಞೆ ಇಲ್ಲ. ಮಹಾ ಅಧಿವೇಶನದಲ್ಲಿ ಮೂರು ಮನೆ ಅಲ್ಲ. ಒಂದೇ ಮನೆ. ಅದು, ವೀರಶೈವ ಲಿಂಗಾಯತ ಮನೆ. ಯತ್ನಾಳ್ ಅವರ ಟೀಕೆಗೆ ಶಾಮನೂರು ಶಿವಶಂಕರಪ್ಪ ಕಿವಿ ಹಿಂಡುವ ಕೆಲಸ ಮಾಡಲಿದ್ದಾರೆ ಎಂದರು.
ಅಧಿವೇಶನದಲ್ಲಿ ಪಾಲ್ಗೊಂಡಿದ್ದು ಮೂರು ಕುಟುಂಬಗಳಲ್ಲ. ಅಲ್ಲಿ ಇದ್ದಿದ್ದು ಒಂದೇ ಕುಟುಂಬ. ಅದು ವೀರಶೈವ-ಲಿಂಗಾಯತ ಕುಟುಂಬ. ಯತ್ನಾಳ ವಿರುದ್ಧ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಬೇಕು. ಇನ್ನೊಮ್ಮೆ ಇಂತಹ ಹೇಳಿಕೆ ನೀಡಿದರೆ, ಜಿಲ್ಲಾ ಕೇಂದ್ರಗಳಲ್ಲೂ ಅವರ ವಿರುದ್ಧ ಪ್ರತಿಭಟಿಸಲಾಗುವುದು ಎಂದು ಸಮಿತಿಯ ರಮೇಶ್ ಬಣಕಾರ್ ಆಗ್ರಹಿಸಿದರು.
ದಾವಣಗೆರೆಯಲ್ಲಿ ನಡೆದ ವೀರಶೈವ ಲಿಂಗಾಯತ ಮಹಾಸಭಾ ಅಧಿವೇಶನ ಕೇವಲ ಭೀಮಣ್ಣ ಖಂಡ್ರೆ, ಶಾಮನೂರು ಶಿವಶಂಕರಪ್ಪ, ಯಡಿಯೂರಪ್ಪ ಕುಟುಂಬದ ಸಮಾವೇಶವಾಗಿದೆ. ಹೀಗಾಗಿ ಮಹಾಸಭಾದಿಂದ ಒಳಪಂಗಡಗಳು ಏನನ್ನೂ ನಿರೀಕ್ಷಿಸಲು ಸಾಧ್ಯವಾಗುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಟೀಕಿಸಿದ್ರು.



