ದಾವಣಗೆರೆ: ಪೋಕ್ಸೊ ಪ್ರಕರಣದಡಿ 14 ತಿಂಗಳಿಂದ ಬಂಧನಕ್ಕೆ ಒಳಗಾಗಿದ್ದ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಚಿತ್ರದುರ್ಗ ಜೈಲಿನಿಂದ ದಾವಣಗೆರೆಗೆ ಆಗಮಿಸಿದ್ದಾರೆ. ನಗರದ ಶಿವಯೋಗಿ ಮಂದಿರದಲ್ಲಿ ಜಯದೇವ ಮುರುಘರಾಜೇಂದ್ರ ಸ್ವಾಮಿ ಹಾಗೂ ಅಥಣಿ ಮುರುಘೇಂದ್ರ ಶಿವಯೋಗಿಗಳ ಗದ್ದುಗೆಗೆ ಭೇಟಿ ನೀಡಿ ನಮಿಸಿದರು.
ಕಳೆದ ವಾರವೇ ಹೈಕೋರ್ಟ್ ಜಾಮೀನು ನೀಡಿತ್ತು. ಮತ್ತೊಂದು ಪ್ರಕರಣದಲ್ಲಿ ಚಿತ್ರದುರ್ಗದಲ್ಲಿ ಗುರುವಾರ ವಿಚಾರಣೆ ನಡೆದು ಜಾಮೀನು ದೊರೆತಿದೆ. ನಡುವೆ ಹೈಕೋರ್ಟ್ ನೀಡಿದ್ದ ಷರತ್ತು ಬದ್ಧ ಜಾಮೀನಿನ ಆದೇಶ ಪ್ರತಿಗಳು ಚಿತ್ರದುರ್ಗ ಜೈಲಿನ ಅಧಿಕಾರಿಗಳಿಗೆ ತಲುಪಿರಲಿಲ್ಲ. ಗುರುವಾರ ಬೆಳಿಗ್ಗೆ ಮುರುಘರಾಜೇಂದ್ರ ಶರಣರ ಪರವಾದ ವಕೀಲರು ಹಸ್ತಾಂತರಿಸಿದ್ದರಿಂದ ಅವರನ್ನು ಬಿಡುಗಡೆ ಮಾಡಲಾಗಿದೆ.
1ನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಷರತ್ತುಬದ್ದ ಜಾಮೀನು ನೀಡಿದ್ದು, ಈ ಪ್ರಕಾರ ಮುರುಘಾಶ್ರೀ ಚಿತ್ರದುರ್ಗ ಪ್ರವೇಶಿಸುವಂತಿಲ್ಲ. ಇಬ್ಬರು ಶ್ಯೂರಿಟಿ ಒದಗಿಸಬೇಕು. ಮತ್ತೆ ಅಪರಾಧ ಕೃತ್ಯವೆಸಗುವಂತಿಲ್ಲ. ಪಾಸ್ ಪೋರ್ಟ್ ಅನ್ನು ವಶಕ್ಕೆ ನೀಡುವುದೂ ಸೇರಿದಂತೆ ಹಲವಾರು ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ. ಇವುಗಳನ್ನೆಲ್ಲಾ ಪಾಲಿಸುವುದಾಗಿ ಮುರುಘಾ ಶರಣರ ಪರ ವಕೀಲರು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.
ಕಳೆದ ವರ್ಷದ ಆಗಸ್ಟ್ 26ರಂದು ಶರಣರು ಹಾಗೂ ಐದು ಮಂದಿ ವಿರುದ್ದ ಮಠದ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಶರಣರನ್ನು ಬಂಧಿಸಲಾಗಿತ್ತು. ಇದಾದ ನಂತರ 2022ರ ಅಕ್ಟೋಬರ್ 19ರಂದು ಮತ್ತೊಂದು ಪ್ರಕರಣ ದಾಖಲಾಗಿತ್ತು.
ಬಿಡುಗಡೆ ನಂತರ ಸುದ್ದಿಗಾರರೊಂದಿ ಮಾತನಾಡಿ, ಪ್ರಕರಣ ವಿಚಾರಣೆ ನ್ಯಾಯಾಲಯದಲ್ಲಿದ್ದು, ಈ ಬಗ್ಗೆ ನಾನು ಏನು ಪ್ರತಿಕ್ರಿಯೆ ನೀಡುವುದಿಲ್ಲ. ಇನ್ನಾದರೂ ಒಳ್ಳೆಯದು ಮಾಡೋಣ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು.ಬಳಿಕ ದೊಡ್ಡಪೇಟೆಯಲ್ಲಿರುವ ವಿರಕ್ತ ಮಠಕ್ಕೆ ಭೇಟಿ ನೀಡಿದರು. ಭಕ್ತರು ಮುರುಘಾ ಶರಣರಿಗೆ ಜೈಕಾರ ಹಾಕಿದರು. ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಹಾಗೂ ಭಕ್ತರು ಭಾಗವಹಿಸಿದ್ದರು.



