ದಾವಣಗೆರೆ: ಹಿಂದಿನ ಬಿಜೆಪಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದ ಚಂಚಮಸಾಲಿ ಲಿಂಗಾಯತ 2ಎ ಮೀಸಲಾತಿ ಹೋರಾಟ, ಇದೀಗ ಮತ್ತೆ ಚುರುಕು ಪಡೆದಿದೆ. ನವೆಂಬರ್ 10 ರಂದು ರಾಷ್ಟ್ರೀಯ ಹೆದ್ದಾರಿ ತಡೆದು ಇಷ್ಟಲಿಂಗ ಪೂಜೆ ಮಾಡಿ ಪ್ರತಿಭಟನೆ ಮಾಡ್ತೇವೆ ಎಂದು ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2ಎ ಮೀಸಲಾತಿ ಜೊತೆ ಲಿಂಗಾಯತ ಉಪ ಪಂಗಡ ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸಲು ಒತ್ತಾಯಿಸ್ತೇವೆ. ಹಿಂದಿನ ಸರ್ಕಾರ ಮೀಸಲಾತಿ ಘೋಷಣೆ ಮಾಡಿತು. ಆದರೆ ನೀತಿ ಸಂಹಿತೆ ಹಿನ್ನಲೆ ಜಾರಿಯಾಗಲಿಲ್ಲ. 2ಡಿ ಮೀಸಲಾತಿ ಆಗ ಅನುಷ್ಠಾನಕ್ಕೆ ಮಾಡಲು ಸಾಧ್ಯವಾಗಲಿಲ್ಲ. ಈಗಿನ ಸರ್ಕಾರಕ್ಕೂ ಕೂಡ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಲಾಗುವುದು ಎಂದರು.
ಹೋರಾಟ ಮೂಲಕ ಮೀಸಲಾತಿ ಪಡೆಯಬೇಕು. ಈಗಿನ ಸರ್ಕಾರ ಅಧಿಕಾರಕ್ಕೆ ಬಂದು ಕೆಲವೇ ತಿಂಗಳಾಗಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೂತು ಇಷ್ಟಲಿಂಗ ಪೂಜೆ ಮಾಡಿ ಹೋರಾಟ ಆರಂಭಿಸ್ತೇವೆ. ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಿ ಎಂದು ಮನವಿ ಮಾಡುತ್ತೇವೆ.ಲೋಕಸಭಾ ಚುನಾವಣೆಯ ಒಳಗೆ ನಮಗೆ ಮೀಸಲಾತಿ ನೀಡಬೇಕು. ಇಲ್ಲದಿದ್ರೆ ಲೋಕಸಭಾ ಚುನಾವಣೆಗೆ ಬಹಳ ಹೊಡೆತ ಬೀಳುತ್ತದೆ. ಎಲ್ಲಾ ಕಡೆ ಸಭೆ ಮಾಡಿ ಜಾಗೃತಿ ಮೂಡಿಸುತ್ತೇವೆ ಎಂದರು.
ಸರ್ಕಾರ ಜಾತಿ ಗಣತಿ ಬಿಡುಗಡೆ ಬಗ್ಗೆ ನಮ್ಮ ವಿರೋಧವಿಲ್ಲ.ಆದರೆ, ಲಿಂಗಾಯತ, ಒಕ್ಕಲಿಗ ಸಮಾಜದ ಜನರಲ್ಲಿ ಆತಂಕ ಇದೆ. ಸರ್ಕಾರ ಎರಡು ಸಮಾಜದ ಶಾಸಕರನ್ನು ಸೇರಿಸಿ ಸಭೆ ಮಾಡಿ ಮನವರಿಕೆ ಮಾಡಿಕೊಳ್ಳಲಿ. ಲಿಂಗಾಯತ ಒಳ ಪಂಗಡದವರು ಎಲ್ಲಿ ಸೌಲಭ್ಯ ಕಟ್ ಆಗುತ್ತದೆ ಎಂದು ಲಿಂಗಾಯತ ಎಂದು ಬರೆಸಿಲ್ಲ. ಇದರಿಂದ ಸಂಖ್ಯೆ ಕಡಿಮೆಯಾಗಿರುವ ಆತಂಕವಿದೆ.
2ಎ ಮೀಸಲಾತಿ ಬಗ್ಗೆ ಜಯಪ್ರಕಾಶ್ ಹೆಗಡೆಯವರ ಮಧ್ಯಂತರ ವರದಿ ನಮ್ಮಪರವಾಗಿ ಬಂದಿದೆ. 2ಎ ಮೀಸಲಾತಿಯಿಂದ ಯಾವ ಜಾತಿಗಳಿಗೂ ಅನ್ಯಾಯವಾಗಲ್ಲ. ಯಾರಿಗೂ ಅನ್ಯಾಯ ವಾಗದಂತೆ ಮೀಸಲಾತಿ ನೀಡಿ ಎಂದು ಆಗ್ರಹಿಸಿದರು.
ಪಂಪ್ ಸೆಟ್ ಆಧಾರಿತ ರೈತರಿಗೆ ಶಾಕ್ ; ಇನ್ಮುಂದೆ ಅಕ್ರಮ ಸಕ್ರಮ ಯೋಜನೆಯಡಿ ಫ್ರೀ ಟ್ರಾನ್ಸ್ ಫಾರ್ಮರ್ ಸಿಗಲ್ಲ….!



