ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯ ಸರ್ಕಾರ ಮಹತ್ವಾಕಾಂಕ್ಷಿಯ ‘ಸಪ್ತಪದಿ’ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಡೇಟ್ ಫಿಕ್ಸ್ ಆಗಿದ್ದು, ನೋಂದಾಯಿಸಿದ ವಧು-ವರನಿಗೆ ಸರ್ಕಾವೇ 55 ಸಾವಿರ ರೂಪಾಯಿ ನೀಡಲಿದೆ.
ಏಪ್ರಿಲ್ 24 , ಮೇ 24 ರಂದು ವಿವಾಹ
ಆಯ್ದ 100 ದೇವಾಲಯದಲ್ಲಿ ವಿವಾಹ
ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಸರ್ಕಾರ ಉದ್ದೇಶ
ಮುಜುರಾಯಿ ಇಲಾಖೆಯಲ್ಲಿ ನೋಂದಾಯಿಸಿ ವಧು-ವರನಿಗೆ 55 ಸಾವಿರ
ವಿಧಾನಸೌಧದಲ್ಲಿ ‘ಸಪ್ತಪದಿ’ ಸಾಮೂಹಿಕ ವಿವಾಹದ ಲಾಂಛನವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಆನಂದ್ ಗುರೂಜೀ ಲಾಂಛನ ಬಿಡುಗಡೆ ಮಾಡಿದರು. ಮುಜರಾಯಿ ಇಲಾಖೆ ವತಿಯಿಂದ ಸಾಮೂಹಿಕ ವಿವಾಹ ನಡೆಯಲಿದ್ದು, ಈ ವರ್ಷದಲ್ಲಿ ಎರಡು ಸಲ ಸಾಮೂಹಿಕ ವಿವಾಹಕ್ಕೆ ಸಿದ್ಧತೆ ನಡೆಸಿದೆ.
ದೇವಾಲಯದ ಗೋಪುರವನ್ನು ಸಂಕೇತವಾಗಿಟ್ಟುಕೊಂಡು ಲಾಂಛನ ರೂಪಿಸಲಾಗಿದೆ. ವೈವಾಹಿಕ ಜೀವನದ ಏಳು ಹೆಜ್ಜೆಯ ಕಲ್ಪನೆಯ ಆಧಾರದ ಮೇಲೆ ಕಾರ್ಯಕ್ರಮಕ್ಕೆ ‘ಸಪ್ತಪದಿ’ ಎಂದು ಹೆಸರಿಡಲಾಗಿದೆ.
ಎ ವರ್ಗದ 100 ದೇವಾಲಯಗಳಲ್ಲಿ ಸಾಮೂಹಿಕ ಕಾರ್ಯಕ್ರಮ ಆಯೋಜನೆಯಾಗಲಿದೆ. ಏಪ್ರಿಲ್ 24ರಂದು ಮೊದಲ ಹಂತದಲ್ಲಿ ಹಾಗೂ ಮೇ 24ರಂದು ಎರಡನೇ ಹಂತದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ವಧುವಿಗೆ ಚಿನ್ನದ ಮಾಂಗಲ್ಯ ಸೇರಿ, ವಧೂವರರಿಗೆ ವಿವಾಹಕ್ಕೆ ಅಗತ್ಯವಿರುವ ವಸ್ತುಗಳ ಖರೀದಿಗೆ 55,000 ರೂ.ಗಳನ್ನು ಮುಜುರಾಯಿ ಇಲಾಖೆ ನೀಡಲಿದೆ.

ಮುಜುರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಪ್ತಪದಿ ಯೋಜನೆ ಅಡಿ ವಿವಾಹ ಆಗುವ ವರನಿಗೆ ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶಲ್ಯ ಖರೀದಿಗೆ 5 ಸಾವಿರ, ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆ, ಕಣಕ್ಕೆ 10 ಸಾವಿರ ರೂ. ವಧುವಿಗೆ ಚಿನ್ನದ ತಾಳಿ ಎರಡು ಚಿನ್ನದ ಗುಂಡು ಖರೀದಿಗೆ 40 ಸಾವಿರ ರೂಪಾಯಿ ಸೇರಿ ಒಟ್ಟು 55 ಸಾವಿರ ನೀಡಲಾಗುವುದು ಎಂದು ಹೇಳಿದರು.
ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ಇತ್ತೀಚಿನ ದಿನಗಳಲ್ಲಿ ಆಡಂಬರದ ವಿವಾಹ ಖರ್ಚಿಗೆ ಮನೆ-ಮಠ ಕಳೆದುಕೊಂಡುವರು ಹೆಚ್ಚಿನವರಿದ್ದಾರೆ. ಸಾಲ ಮಾಡಿಕೊಂಡು ವಧು-ವರರು, ಪೋಷಕರು ನೋವು ಅನುಭವಿಸುತ್ತಿದ್ದಾರೆ. ಎಲ್ಲ ವರ್ಗದ ಜನರ ಅನುಕೂಲಕ್ಕೆ 100 ಆಯ್ದ ದೇವಾಲಯಗಳಲ್ಲಿ ಪ್ರತಿ ವರ್ಷ ಸಾಮೂಹಿಕ ವಿವಾಹ ಹಮ್ಮಿಕೊಳ್ಳುತ್ತಿದ್ದೇವೆ ಎಂದರು.
ವಿವಾಹದ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಮೂಹಿಕ ವಿವಾಹಗಳು ಅವಶ್ಯಕವಾಗಿವೆ. ದೇವರ ದುಡ್ಡು ಸದ್ಬಳಕೆ ಆಗಬೇಕು ಎಂಬುದು ಉದ್ದೇಶ. ಯಾವುದೇ ಕಾರಣಕ್ಕೂ ಬಾಲ್ಯ ವಿವಾಹಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.



