ದಾವಣಗೆರೆ: ಆಹಾರ ಹುಡುಕಿ ಕಾಡಿನಿಂದ ನಾಡಿಗೆ ಬಂದ ಆನೆಯೊಂದು ನಿನ್ನೆ (ಏ.08) ಜನರ ಮೇಲೆ ಏಕಾಏಕಿ ದಾಳಿ ಮಾಡಿತ್ತು. ಈ ದಾಳಿಯಲ್ಲಿ ಕವನ (17) ಎಂಬ ಯುವತಿ ಸಾವನ್ನಪ್ಪಿದ್ದಳು. ಇನ್ನೂ ಐವರಿಗೆ ಗಂಭೀರ ಗಾಯಗಳಾಗಿವೆ. ಈ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೋಮ್ಲಾಪುರ, ಕಾಶಿಪುರ ಗ್ರಾಮದ ಬಳಿ ನಡೆದಿತ್ತು. ಇದೀಗ ಸಾವನ್ನಪ್ಪಿದ ಯುವತಿ ಕುಟುಂಬಕ್ಕೆ ಅರಣ್ಯ ಇಲಾಖೆ 15 ಲಕ್ಷ ಪರಿಹಾರ ಘೋಷಿಸಿದೆ.
ಜಮೀನಿನಲ್ಲಿ ತಾಯಿ ಜೊತೆ ಅವರೆಕಾಯಿ ಬಿಡಿಸುವಾಗ ಹಿಂದಿನಿಂದ ಬಂದ ಆನೆ ದಾಳಿ ಮಾಡಿದೆ. ಗಂಭೀರವಾಗಿ ಗಾಯಗೊಂಡ ಕವನಾಳನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯದಲ್ಲೇ ಸಾವನಪ್ಪಿದ್ದಾರೆ. ಇನ್ನು ಗಾಯಗೊಂಡ ತಾಯಿ ಮಂಜುಳಾ ಮತ್ತು ಇತರನ್ನು ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯಿಂದ ಸುತ್ತಮುತ್ತ ಗ್ರಾಮದ ಜನ ಭಯ ಭೀತರಾಗಿದ್ದಾರೆ.
ಬಾಲಕಿ ಕುಟುಂಬಕ್ಕೆ 15 ಲಕ್ಷ ಪರಿಹಾರ; ಕಾಡಾನೆಯನ್ನು ಭದ್ರಾ ಅಭಯಾರಣ್ಯಕ್ಕೆ ಓಡಿಸಲು ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಸುತ್ತಲಿನ ಗ್ರಾಮಸ್ಥರು ಶನಿವಾರ ಬೆಳಿಗ್ಗೆಯಿಂದಲೇ ಪ್ರಯತ್ನಿಸುತ್ತಿದ್ದಾರೆ. ಸದ್ಯಕ್ಕೆ ಅರಿಶಿನಘಟ್ಟದ ಗ್ರಾಮದ ಮಠದ ಬಳಿ ಕಾಡಾನೆಯು ಬೀಡು ಬಿಟ್ಟಿದೆ. ಹೊಳಲ್ಕೆರೆ ಭಾಗದಿಂದ ಬ೦ದಿರುವ
ಕಾಡಾನೆಯು ನೀರು ಮತ್ತು ಆಹಾರವನ್ನು ಅರಸಿಕೊಂಡು ಇಲ್ಲಿಗೆ ಬಂದಿದೆ. ಆದಷ್ಟು ಬೇಗನೆ ಅದನ್ನು ಕಾಡಿಗೆ ಅಟ್ಟುತ್ತೇವೆ. ಕಾಡಾನೆಗೆ ದಾಳಿಗೆ ಮೃತಪಟ್ಟ ಬಾಲಕಿ ಕವನಶ್ರೀ ಕುಟುಂಬಕ್ಕೆ 15 ಲಕ್ಷ ಪರಿಹಾರ ನೀಡುವ ಜೊತೆಗೆ ಗಾಯಾಳುಗಳ ಚಿಕಿತ್ಸಾ ವೆಚ್ಚ ಮತ್ತು ಪರಿಹಾರವನ್ನು ಇಲಾಖೆ ಭರಿಸಲಿದೆ ಎಂದು ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿ ಜಗದೀಶ್ ತಿಳಿಸಿದ್ದಾರೆ.
ಶನಿವಾರ ಬೆಳಗಿ ಕಾಣಿಸಿಕೊಂಡ ಆನೆ, ಕವನ ತಾಯಿ ಸಹಿತ ಐವರ ಮೇಲೆ ದಾಳಿ ನಡೆದಿದೆ. ಕಾಶಿಪುರ, ಸೋಮ್ಲಾಪುರ, ಸೂಳೆಕೆರೆ ಸುತ್ತಮುತ್ತಲಿನ ಜನರು ಭಯಗೊಂಡಿದ್ದಾರೆ. ಯಾರು ಕೂಡ ಒಂಟಿಯಾಗಿ ಓಡಾಡಬಾರದು ಎಂದು ಅರಣ್ಯ ಇಲಾಖೆಯಿಂದ ಜನರಿಗೆ ಎಚ್ಚರಿಕೆ ನೀಡಿದೆ. ಅರಣ್ಯ ಇಲಾಖೆ ಆನೆ ಓಡಿಸುವ ಕೆಲಸದಲ್ಲಿ ನಿರತವಾಗಿದೆ. ಸಂತೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಹೊನ್ನಾಳಿಯತ್ತ ಕಾಡಾನೆ; ಎಚ್ಚರಿಕೆ; ಚನ್ನಗಿರಿ ತಾಲೂಕು ಅರಿಶಿನಘಟ್ಟ ಬಳಿ ಸೂಳೆಕೆರೆಯ ಹಿನ್ನೀರಿನ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಕಾಡಾನೆಯು ಶನಿವಾರ ರಾತ್ರಿ ಹೊನ್ನಾಳಿ ತಾಲೂಕಿನ ಹಾಲೇಶಪುರ, ಭೈರನಹಳ್ಳಿ, ಚನ್ನೇನಹಳ್ಳಿ, ಕ್ಯಾಸಿನಕೆರೆ, ಕುಳಘಟ್ಟ, ಮಲ್ಲಿಕಟ್ಟೆ, ರಾಂಪುರ, ಉಜ್ಜಯಿನಿಪುರ, ಹೊಳೆ ಬೆನಕನಹಳ್ಳಿ, ಕಮ್ಮಾರಘಟ್ಟ, ತರಗನಹಳ್ಳಿ, ತಕ್ಕನಹಳ್ಳಿ ಮಾರ್ಗದಲ್ಲಿ ಸಂಚರಿಸುವ ಸಾಧ್ಯತೆ ಇದೆ. ಆಯಾ ಭಾಗದ ಗ್ರಾಮಸ್ಥರು, ರೈತರು ರಾತ್ರಿ ವೇಳೆ ಯಾರೂ ತೋಟಗಳಿಗೆ ಹೋಗಬಾರದು.
ಸದಾ ಜಾಗ್ರತೆಯಿಂದ ಇರುವಂತೆ ಅರಣ್ಯ
ಇಲಾಖೆಯು ಎಚ್ಚರಿಸಿದೆ.



