ದಾವಣಗೆರೆ: ನಗರದಲ್ಲಿ ಮಾ. 20ರಿಂದ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ರೆ ದಂಡ ವಿಧಿಸಲಾಗುವುದು. ಸಿಗ್ನಲ್ ಜಂಪ್ ಮಾಡಿದ್ರೆ ಸ್ವಯಂಚಾಲಿತ ಪ್ರಕರಣ ದಾಖಲಿಸುವ ವ್ಯವಸ್ಥೆ ಜಾರಿ ತರಲಾಗಿದೆ ಎಂದು ಸಾರ್ವಜನಿಕರಿಗೆ ಎಸ್ಪಿ ರಿಷ್ಯಂತ್ ಎಚ್ಚರಿಕೆ ನೀಡಿದ್ದಾರೆ.
ಸಿಗ್ನಲ್ ಜಂಪ್ ಮಾಡಿದ್ರೆ ಸ್ವಯಂಚಾಲಿತ ಪ್ರಕರಣ ದಾಖಲು ಮಾಡಲಾಗುತ್ತಿದೆ. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸ್ವಯಂಚಾಲಿತ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಇನ್ನೂ 9 ಕಡೆ ಸಿಗ್ನಲ್ ಗಳಲ್ಲಿ ಈ ವ್ಯವಸ್ಥೆ ಅಳವಡಿಸುವ ಯೋಜನೆ ಇದೆ ಎಂದರು.
ಸ್ಮಾರ್ಟ್ಸಿಟಿ ಯೋಜನೆಯಡಿ ನಗರದ ಸಿಗ್ನಲ್ಗಳಲ್ಲಿ ಸೆನ್ಸಾರ್ ಆಧಾರಿತ ಸಂಚಾರ ನಿಯಂತ್ರಣ ವ್ಯವಸ್ಥೆ ಅಳವಡಿಸಲಾಗಿದೆ. ಮಾರ್ಚ್ 20ರಂದು ಸಂಚಾರ ಜಾಗೃತಿ ಅಭಿಯಾನ ನಡೆಸಲಾಗುವುದು. ಬಳಿಕ ಸಿಗ್ನಲ್ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ಸಿಗ್ನಲ್ ರೆಡ್ ಇದ್ದಾಗ ಸೆಕೆಂಡ್ ನಂಬರ್ ಬೀಳುತ್ತಿರುತ್ತದೆ. ಅದು ಸೊನ್ನೆಗೆ ಬಂದ ಮೇಲೂ ಮೂರು ಸೆಕೆಂಡ್ಸ್ನಷ್ಟು ಹೊತ್ತು ಎಸ್ಪಿ ಎಂದು ಬರುತ್ತದೆ. ಆಗ ಕೆಂಪು ಸಿಗ್ನಲ್ಲೇ ಇರುತ್ತದೆ. ಹಸಿರು ಸಿಗ್ನಲ್ ಬರುತ್ತದೆ. ನಂಬರ್ ಸೊನ್ನೆಗೆ ಬಂದ ತಕ್ಷಣ ಹೊರಡದೇ 3 ಸೆಕೆಂಡ್ಸ್ ನಿಂತು ಸವ ಸವಾರರು ಮುಂದಕ್ಕೆ ಚಲಿಸಬೇಕು ಎಂದು ಮಾಹಿತಿ ನೀಡಿದರು.
ಕಡಿಮೆ ವಾಹನ ಒತ್ತಡ ಇದ್ದಾಗ ನಿಲುಗಡೆಗೆ ಕಡಿಮೆ ಸೆಕೆಂಡ್ ತೋರಿಸುತ್ತದೆ. ಹೆಚ್ಚು ವಾಹನ ಒತ್ತಡ ಇದ್ದಾಗ ನಿಲುಗಡೆಗೆ ಹೆಚ್ಚು ಸೆಕೆಂಡ್ ತೋರಿಸುತ್ತದೆ. ನಗರದಲ್ಲಿ 23 ಕಡೆಗಳಲ್ಲಿ ಸಿಗ್ನಲ್ ಗಳಿವೆ. ಸಿಗ್ನಲ್ಗಳಲ್ಲಿ ಹಸಿರು ಬರುವವರೆಗೆ ವಾಹನಗಳನ್ನು ಆಫ್ ಮಾಡಿ ಇಡಬೇಕು. ತ್ರಿಬಲ್ ರೈಡ್, ಕರ್ಕಶ ಸದ್ದು ಮಾಡುವ ಸೈಲೆನ್ಸರ್ ನಿಯಂತ್ರಿಸಲು ಈಗಾಗಲೇ ದಂಡ ವಿಧಿಸಲಾಗುತ್ತಿದೆ. ಮುಂದೆ ಇನ್ನಷ್ಟು ಚುರುಕುಗೊಳಿಸಲಾಗುವುದು. ಟ್ರಾಫಿಕ್ ಜಾಮ್ ತಪ್ಪಿಸಲು ಲೋಡಿಂಗ್ ಅನ್ಲೋಡಿಂಗ್ಗೆ ಸಮಯ ನಿಗದಿಪಡಿಸಲು ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.



