ಬೆಂಗಳೂರು: 7 ನೇ ವೇತನ ಆಯೋಗದ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪಿಸದಕ್ಕೆ ಸರ್ಕಾರಿ ನೌಕರರ ಸಂಘ ತೀವ್ರ ಬೇಸರ ವ್ಯಕ್ತಪಡಿಸಿದ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆ ಕುರಿತ ಮಾತನಾಡಿದ್ದಾರೆ. ಬಜೆಟ್ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 7ನೇ ವೇತನ ಆಯೋಗ ಜಾರಿ ಖಚಿತವಾಗಿದ್ದು, ಈ ವರ್ಷವೇ 7ನೇ ವೇತನ ಆಯೋಗದ ವರದಿ ಅನುಷ್ಠಾನಕ್ಕೆ ಬರಲಿದೆ ಎಂದು ಭರವಸೆ ನೀಡಿದರು.
ಏಳನೇ ವೇತನ ಆಯೋಗದ ಅನುಷ್ಠಾನದ ಕುರಿತು ಬಜೆಟ್ನಲ್ಲಿ ಆ ಬಗ್ಗೆ ಪ್ರಸ್ತಾಪಿಸಿಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಇದಕ್ಕೆ ಸಿಎಂ ಪ್ರತಿಕ್ರಿಯಿಸಿದ್ದು, ಏಳನೇ ವೇತನ ಆಯೋಗದ ವರದಿ ಶೀಘ್ರವೇ ಬರಲಿದೆ. ಈ ವರ್ಷದ ಬಜೆಟ್ನಲ್ಲಿ 6 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದು, ಈ ವರ್ಷವೇ 7ನೇ ವೇತನ ಆಯೋಗದ ವರದಿ ಅನುಷ್ಠಾನ ಮಾಡುತ್ತೇವೆ. ಚುನಾವಣೆ ಇದೆ ಎಂದು ನಾನು ಕೂಡ ಬೇಜಾವಾಬ್ದಾರಿಯಿಂದ ಘೋಷಣೆಗಳನ್ನು ಮಾಡಬಹುದಿತ್ತು. ಮಹಿಳೆಯರಿಗೆ ಇಷ್ಟು ಕೊಡುತ್ತೇವೆ, ಅಷ್ಟು ಕೊಡುತ್ತೇವೆ ಎಂದೂ ಹೇಳಬಹುದಿತ್ತು. ಆದರೆ ನಮ್ಮದು ಜವಾಬ್ದಾರಿಯುತ ಸರ್ಕಾರ ಎಂದರು.



