ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಹಾಕುವುದು ಸಾಮಾನ್ಯವಾಗಿಬಿಟ್ಟಿದೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರ ತಂಡವೊಂದು, ಕಸ ಹಾಕುವವರನ್ನು ಕಾದು ಹಿಡಿದು ಕಸ ಹಾಕಿದವರ ಕೈಯಲ್ಲಿ ಕಸ ಎತ್ತಿ ಹಾಕಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇದಲ್ಲದೇ ಕಸ ಹಾಕಿದವರ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ.
ನಗರದ ರೇಣುಕಾ ಮಂದಿರ ಪಕ್ಕದಲ್ಲಿರುವ ರೈಲ್ವೆ ಅಂಡರ್ ಪಾಸ್ ಬಳಿ ಪ್ರತಿ ದಿನ ಜನರು ಕಸ ತಂದು ಹಾಕುತ್ತಿದ್ದು, ಪಾಲಿಕೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಕೆಟ್ಟ ವಾಸನೆ ಬರುತ್ತಿತ್ತು. ಈ ಅನೇಕ ಸಲ ಪಾಲಿಕೆ ದೂರು ನೀಡಿ ಸುಸ್ತಾಗಿದ್ದ ಸಾಮಾಜಿಕ ಕಾರ್ಯಕರ್ತರು, ಸ್ವತಃ ತಾವೇ ಸ್ವಚ್ಛ ಮಾಡಿದ್ದರು. ಮರು ದಿನ ಬೆಳಗ್ಗೆ ಕಸ ಹಾಕುವರನ್ನು ಕಾದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿ ಛೀಮಾರಿ ಹಾಕಲಾಗುತ್ತಿದ್ದಾರೆ. ಇದರ ಜತೆಗೆ ಕಸ ಹಾಕಿದವರ ಕೈಯಲ್ಲಿಯೇ ಕಸ ತೆಗೆದು ಹಾಕಿಸುತ್ತಿದ್ದಾರೆ.
ರೇಣುಕಾಮಂದಿರ ಅಂಡರ್ ಪಾಸ್ ನಲ್ಲಿ ಬೇಕಾಬಿಟ್ಟಿಯಾಗಿ ಕಸ ಹಾಕುತ್ತಿದ್ದರೂ ಪಾಲಿಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಪ್ರದೇಶ ಕೆಟ್ಟ ವಾಸನೆ ಬರುತಿತ್ತು. ವಾಹನ ಸವಾರರು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ನಿರ್ಮಾಣ ಆಗಿತ್ತು. ಹೀಗಾಗಿ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಮತ್ತು ಸ್ನೇಹಿತ ಇಂತಹ ಕಾರ್ಯಕ್ಕೆ ಮುಂದಾಗಿದ್ದಾರೆ.



