ದಾವಣಗೆರೆ: ಭಾರೀ ಮಳೆಯಿಂದ ತಾಲ್ಲೂಕಿನ ಅಣಜಿ ಕೆರೆ ಕೋಡಿ ಬಿದ್ದಿದೆ. ಇದರಿಂದ ಜಗಳೂರು-ದಾವಣಗೆರೆ ಮುಖ್ಯ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಹೀಗಾಗಿ ಈ ಮುಖ್ಯ ರಸ್ತೆಯಲ್ಲಿ ವಾಹನ ಓಡಾಟವನ್ನು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರು ತಾತ್ಕಾಲಿಕವಾಗಿ ಸ್ಥಗಿತ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಮಾರ್ಗಕ್ಕೆ ಬದಲಿ ಮಾರ್ಗದಲ್ಲಿ ವಾಹನ ಸಂಚರಿಸುವಂತೆ ಸೂಚಿಸಿದ್ದಾರೆ.
ಕಳೆದ 15 ದಿನದಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯ ಎಲ್ಲ ಕೆರೆ- ಕಟ್ಟೆಗಳು ಉಕ್ಕಿ ಹರಿಯುತ್ತಿವೆ. ಅಣಜಿ ಕೆರೆಯು ಸಹ ಉಕ್ಕಿ ಹರಿಯುತ್ತಿದ್ದು, ಜಗಳೂರು- ದಾವಣಗೆರೆ ಸಂಪರ್ಕ ಮುಖ್ಯ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಹೀಗಾಗಿ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಬದಲಿ ಮಾರ್ಗಗಳು ಈ ರೀತಿ ಇದೆ; ದಾವಣಗೆರೆ ಕಡೆಯಿಂದ ಹೋಗುವ ವಾಹನಗಳು ಅಣಜಿ ಕ್ರಾಸ್ ಮೂಲಕ ಅರಸಿಕೆರೆ, ಬಸವನಕೋಟೆ ಮೂಲಕ ಜಗಳೂರು ತಲಪಬಹುದು ಅಥವಾ ರಾಷ್ಟ್ರೀಯ ಹೆದ್ದಾರಿ 48 ಮೂಲಕ ಭರಮಸಾಗರ ತಲುಪಿ, ಅಲ್ಲಿಂದ ಬಿಳಿಚೋಡು ಮಾರ್ಗವಾಗಿ ಜಗಳೂರು ತಲುಪಬಹುದು. ಇನ್ನೂ ಜಗಳೂರು ಕಡೆಯಿಂದ ದಾವಣಗೆರೆಗೆ ಬರುವವರು ಬಿಳಿಚೋಡು ಮೂಲಕ ಭರಮಸಾರ ತಲುಪಿ, ರಾಷ್ಟ್ರೀಯ ಹೆದ್ದಾರಿ 48 ಮೂಲಕ ದಾವಣಗೆರೆ ತಲುಪಿಸಲಾಗುವುದು. ಇದಲ್ಲದೆ ಬಿದರಿಕೆರೆ ಭರಮಸಾಗರ ಮೂಲಕ ರಾಷ್ಟ್ರೀಯ ಹೆದ್ದಾರಿ 48 ಮೂಲಕ ದಾವಣಗೆರೆ ತಲುಪಬಹುದು.



