ದಾವಣಗೆರೆ: ಶ್ರೀ ಸೇವಾಲಾಲ್ ಪತ್ತಿನ ಸಹಕಾರ ಸಂಘದ ಉದ್ಘಾಟನೆಯು ಆ. 12 ರಂದು ಕಾಳಿದಾಸ ವೃತ್ತದಲ್ಲಿರುವ ಶ್ರೀ ಸೇವಾಲಾಲ್ ಸಮುದಾಯ ಭವನದಲ್ಲಿ ನಡೆಯಲಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಎನ್. ಹನುಮಂತನಾಯ್ಕ್, ಬಂಜಾರ ಸಮುದಾಯ ಬಾಂಧವರು ಸಹಕಾರ ಸಂಘ ಪ್ರಾರಂಭಿಸಬೇಕು ಎಂದು ನಿರ್ಧರಿಸಲಾಗಿತ್ತು. ಸಂಘ ಸ್ಥಾಪಿಸಲು ಇದೀಗ ಕಾಲ ಕೂಡಿ ಬಂದಿದೆ. ಮಧ್ಯ ಕರ್ನಾಟಕದಲ್ಲಿ ಬಂಜಾರ ಸಮಾಜದ ಸಹಕಾರ ಸಂಘ ಆಗಲಿದೆ ಎಂದು ತಿಳಿಸಿದರು.
ಆ.12 ರಂದು ಬೆಳಗ್ಗೆ 10.30ಕ್ಕೆ ಮೇಯರ್ ಜಯಮ್ಮ ಗೋಪಿನಾಯ್ಕ್ ಉದ್ಘಾಟನೆ ಮಾಡುವರು. ಸಂಸದ ಡಾ. ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್. ಎ. ರವೀಂದ್ರನಾಥ್, ಶಾಮನೂರು ಶಿವಶಂಕರಪ್ಪ, ಮಾಜಿ ಶಾಸಕ ಎಂ. ಬಸವರಾಜನಾಯ್ಕ, ಧೂಡಾ ಅಧ್ಯಕ್ಷ ಕೆ.ಎಂ. ಸುರೇಶ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ವೇಣುಗೋಪಾಲ ರೆಡ್ಡಿ ಇತರರು ಭಾಗವಹಿಸುವರು ಎಂದು ತಿಳಿಸಿದರು. ಪ್ರಾರಂಭಿಕ ಹಂತದಲ್ಲಿ ಒಟ್ಟು 600 ಜನರಿಂದ ಒಂದು ಸಾವಿರದಂತೆ ಷೇರು ಹೂಡಲಾಗಿದೆ. 11ಲಕ್ಷ ಬಂಡವಾಳ ಇದೆ. ಲಂಬಾಣಿ ಮತ್ತು ಇತರೆ ಸಮಾಜದ ಬಾಂಧವರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಜಿ. ಮಂಜಾನಾಯ್ಕ್, ವೆಂಕಟೇಶ ನಾಯ್ಕ್, ಮಹೇಂದ್ರ ನಾಯ್ಕ್, ಎನ್. ವಿಠ್ಠಲ ಇದ್ದರು.



