ದಾವಣಗೆರೆ: ದಾವಣಗೆರೆ ಚನ್ನಗಿರಿ ಸಂಪರ್ಕಿಸುವ ರಾಜ್ಯ ಹೆದ್ದಾರಿ ಪಕ್ಕದ ಹದಡಿ ಕೆರೆಯ ಏರಿ ಒಂದು ಭಾಗದಲ್ಲಿ ಸತತ ಕುಸಿತಕ್ಕೊಳಗಾಗುತ್ತಿದ್ದು ಶಾಶ್ವತ ದುರಸ್ತಿಗೆ ಸರ್ಕಾರ 1.70 ಕೋಟಿ ಮಂಜೂರು ಮಾಡಿದೆ ಎಂದು ನಗರಾಭಿವೃದ್ದಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಹೇಳಿದರು.
ಕೆರೆ ಏರಿಯ ಕುಸಿತದ ಭಾಗ ಪರಿಶೀಲಿಸಿ ಮಾತನಾಡಿದ ಅವರು, ಮಳೆ ಮುಗಿದ ತಕ್ಷಣ ಕಾಮಗಾರಿ ಆರಂಭಿಸಿ ಶೀಘ್ರದಲ್ಲಿ ಕಾಮಗಾರಿ ಮುಗಿಸಲಾಗುವುದು. ಕಾಮಗಾರಿ ಮುಗಿಯುವವರೆಗೆ ಭಾರಿ ವಾಹನಗಳು ಈ ರಸ್ತೆಯಲ್ಲಿ ಸಂಚರಿಸದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಹಾಗೂ ಎಸ್.ಪಿ.ಅವರಿಗೆ ಸೂಚಿಸಲಾಗಿದೆ ಎಂದರು.
ರೈತರು ಹಾಗೂ ಸ್ಥಳೀಯ ಗ್ರಾಮಸ್ಥರು ರಸ್ತೆ ಪಕ್ಕ ತಡೆಗೋಡೆ ನಿರ್ಮಿಸುವಂತೆ ಕೇಳುತಿದ್ದಾರೆ, ಈ ಬಗೆಗೆ ಶೀಘ್ರದಲ್ಲಿ ಅಧಿಕಾರಿಗಳು ಇಂಜಿನಿಯರ್ ಗಳ ಸಭೆ ನಡೆಸಿ ಸಾಧ್ಯಾಸಾಧ್ಯತೆಗಳ ಪರಿಶೀಲಿಸಲಾಗುವುದು. ಮಳೆ ಹಾನಿ ತುರ್ತು ಕಾರ್ಯಗಳಿಗೆ ಸರ್ಕಾರ ಜಿಲ್ಲೆಗೆ 15 ಕೋಟಿ ರೂಗಳನ್ನು ನೀಡಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿ.ಪಂ.ಸಿಇಓ ಡಾ.ಚನ್ನಪ್ಪ, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಅಡಿಷನ್ ಎಸ್.ಪಿ ರಾಮಗೊಂಡ ಬಸರಗಿ, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಉಪಸ್ಥಿತರಿದ್ದರು.



