ದಾವಣಗೆರೆ: ಹೊಟ್ಟೆ ನೋವಿಗೆ ಆಪರೇಷನ್ ಮಾಡಿ ಹೊಲಿಗೆ ಹಾಕದೇ ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಯಕ್ಕೆ ವೃದ್ಧೆಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ನಗರದ ಕೆಆರ್ ರಸ್ತೆಯ ಗುರುನಾಥ್ ಬೊಂದಡೆ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಆಸ್ಪತ್ರೆಯ ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದ ಆಸ್ಪತ್ರೆಯ ಮುಂದೆ ಮೃತದೇಹವಿಟ್ಟು ಸಂಬಂಧಿಕರು ಆಕ್ರೋಶ ಹೊರ ಹಾಕಿದ್ದಾರೆ. 65 ವರ್ಷದ ಅನ್ನಪೂರ್ಣಮ್ಮ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನಲೆ ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ವೈದ್ಯ ದೀಪಕ್ ಬೊಂದಡೆ ಅಜ್ಜಿಯ ಹೊಟ್ಟೆ ಕೊಯ್ದು ಆಪರೇಷನ್ ಮಾಡಿ ಹಾಗೆ ಬಿಟ್ಟಿದ್ದಾರೆ. ಆಪರೇಷನ್ ಮಾಡಿ 15 ದಿನ ಆದರೂ ಹೊಲಿಗೆ ಹಾಕಿಲ್ಲ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ವಿಚಾರಿಸಿದರೆ ತನ್ನಷ್ಟಕ್ಕೆ ತಾನೇ ಕೂಡಿಕೊಳ್ಳುವುದು ಎಂದಿದ್ದಾರೆ. ಮತ್ತೊಂದು ಕಡೆ ಆಸ್ಪತ್ರೆಯವರು ಯಾವುದೇ ಬಿಲ್ ನೀಡದೆ 3 ಲಕ್ಷಕ್ಕೂ ಅಧಿಕ ಬಿಲ್ ಕಟ್ಟಿಸಿಕೊಂಡಿದ್ದಾರೆ.
ಇತ್ತಿಚೆಗೆ ಮತ್ತೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಮಕ್ಕಳು ವೃದ್ದೆಯನ್ನು ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ. 15 ದಿನಗಳಿಂದ ಜೀವಂತ ಶವವಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ದೆ ಇಂದು ಬೆಳಗ್ಗೆ ಮೃತಪಟ್ಟಿದ್ದು, ಇದೀಗ ಖಾಸಗಿ ಆಸ್ಪತ್ರೆಯ ಮುಂದೆ ಶವ ಇಟ್ಟು ಆಕ್ರೋಶ ಹೊರ ಹಾಕಿದ್ದಾರೆ. ಸ್ಥಳಕ್ಕೆ ಬಸವನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.



