ದಾವಣಗೆರೆ: ಇತ್ತೀಚೆಗೆ ಪಂಜಾಬ್ ನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ದಾವಣಗೆರೆಯ ಜಯನಗರದ ಕರಾಟೆ ಕೇಸರಿ ಮಾರ್ಷಲ್ ಆರ್ಟ್ಸ್ ಸಂಸ್ಥೆಯ ಎಂ. ಜೀವನ್ ಸಾಗರ್ ಅವರನ್ನು ಎಂಸಿಸಿ ಬಿ ಬ್ಲಾಕ್ ನ ಈಜುಕೊಳ ಪಕ್ಕದ ಪಾರ್ಕ್ ನಲ್ಲಿನ ಪುನೀತ ಆನಂದಗೂಡಿನಲ್ಲಿ ಸನ್ಮಾನಿಸಲಾಯಿತು.
ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ವಾರ್ಡ್ ನ ಜನರು ಜೀವನ್ ಸಾಗರ್ ಅವರನ್ನು ಅಭಿನಂದಿಸಿದರು.
ಈ ವೇಳೆ ಮಾತನಾಡಿದ ಮಂಜುನಾಥ್ ಗಡಿಗುಡಾಳ್ ಅವರು, ಪಂಜಾಬ್ ನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ದಾವಣಗೆರೆ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿರುವುದು ಸಂತೋಷದ ವಿಚಾರ. ಕರ್ನಾಟಕ ರಾಜ್ಯ ಹಾಗೂ ದಾವಣಗೆರೆಗೆ ಕೀರ್ತಿ ತಂದಿರುವ ಈ ಕ್ರೀಡಾಪಟು ಮತ್ತಷ್ಟು ಸಾಧನೆ ಮಾಡಲಿ ಎಂದು ಹಾರೈಸಿದರು.
ಕರಾಟೆಯು ಆತ್ಮಕಲೆ. ಇದರಲ್ಲಿ ಸಾಕಷ್ಟು ಪರಿಶ್ರಮ ವಹಿಸಿ ಕಠಿಣ ಅಭ್ಯಾಸ ಮಾಡಿ ಗೆದ್ದು ಬಂದಿರುವುದು ಎಲ್ಲರಿಗೂ ಮಾದರಿ. ನಮ್ಮ ಕೈಯಲ್ಲಾದ ಸಹಾಯ ಮಾಡುತ್ತೇವೆ. ಮುಂಬರುವ ದಿನಗಳಲ್ಲಿ ಇನ್ನು ಹಲವು ಚಾಂಪಿಯನ್ ಶಿಪ್ನಲ್ಲಿ ಗೆದ್ದು ಬರಲಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತ ಸಾಧನೆ ಮಾಡುವಂತಾಗಲಿ ಎಂದು ಹೇಳಿದರು.ಕಾಂಗ್ರೆಸ್ ಯುವ ಮುಖಂಡರಾದ ನವೀನ್ ನಲ್ವಾಡಿ, ಕಾರ್ತಿಕ್, ಧನುಷ್, ವಿನಯ್, ಹರೀಶ್, ಸಿದ್ದೇಶ್, ಮಹೇಶ್, ಕಿಟ್ಟಿ, ಆದರ್ಶ್, ಅನಿಲ್, ಮಧು, ನಿಖಿಲ್, ಮನು ಮತ್ತಿತರರು ಹಾಜರಿದ್ದರು.



