ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ನೂತನ ಮೇಯರ್ ಆಯ್ಕೆಯಾಗಿ 4 ತಿಂಗಳು ಕಳೆದರೂ ಕೌನ್ಸಿಲ್ ಸಾಮಾನ್ಯ ಸಭೆಯನ್ನು ಕರೆದಿಲ್ಲ, ಸಾರ್ವಜನಿಕವಾಗಿ ವಾರ್ಡ್ಗಳ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಟ್ಟಿಲ್ಲ. ಇದು ಪಾಲಿಕೆ ಆಡಳಿತ ವೈಫಲ್ಯ ತೋರಿಸುತ್ತದೆ ಎಂದು ಪಾಲಿಕೆ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯ ನಿಧಿಯಲ್ಲಿ ವಾರ್ಡಿನ ತುರ್ತು ಕಾಮಗಾರಿಗಳನ್ನು ಕೈಗೊಂಡಿಲ್ಲ ಈ ಬಗ್ಗೆ ಕೇಳಿದರೆ ಕಳೆದ ಮೇಯರ್ ಅವಧಿಯಲ್ಲಿ ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆ ಎನ್ನುತ್ತಾರೆ. ಕೆಲವೊಂದು ವಾರ್ಡುಗಳಲ್ಲಿ ಮಾತ್ರ ಸುಮಾರು 30 ರಿಂದ 50 ಕೋಟಿ ರೂ ಕಾಮಗಾರಿಯ ಕೆಲಸ ಮಾಡಲಾಗಿದೆ. ಚೇಂಜ್ ಆಫ್ ವರ್ಕ್ ನ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ಡಬಲ್ ಇಂಜಿನ್ ಸರ್ಕಾರ ಇದ್ದರೂ ಪಾಲಿಕೆಯಲ್ಲಿ ಆಡಳಿತ ವೈಫಲ್ಯವಾಗಿದೆ. ಕೇಬಲ್ಗಳು ಬೆಸ್ಕಾಂ ಕಂಬಗಳಿಗೆ ಹಾಕಿದ್ದು ಇದರಿಂದ ಪಾಲಿಕೆಗೆ ಯಾವುದೇ ಹಣ ಪಾವತಿಸಿಕೊಳ್ಳದೇ ಅವಕಾಶ ಮಾಡಿಕೊಟ್ಟಿದೆ . ಈಗಾಗಲೇ ಕೌನ್ಸಿಲ್ ಸಭೆಯಲ್ಲಿ ಎಲ್ಲಾ ಸದಸ್ಯರು ವಿರೋಧ ವ್ಯಕ್ತ ಪಡಿಸಿದರೂ ಅವರ ವಿರುದ್ಧ ಬೆಸ್ಕಾಂ ಅಧಿಕಾರಿಗಳು ಹಾಗು ಮಹಾನಗರ ಪಾಲಿಕೆ ಯಾವ ಕ್ರಮ ಕೈಗೊಂಡಿಲ್ಲ . ಕೆಲ ಕಡೆ ಕೇಬಲ್ ತುಂಡಾಗಿ ರಸ್ತೆ ಉದ್ದಕ್ಕೂ ಬಿದ್ದು ದ್ವಿಚಕ್ರ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ ಇದನ್ನು ಸರಿಪಡಿಸಬೇಕು ಎಂದರು.
ಪಾಲಿಕೆ ಸದಸ್ಯ ಎ.ನಾಗರಾಜ್ ಮಾತನಾಡಿ ಆಡಳಿತ ಪಕ್ಷಕ್ಕೆ ನಗರದ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ.ಪ್ರತಿ ತಿಂಗಳು ಸಭೆ ಕರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗ್ಲಾಸ್ ಹೌಸ್ ಹತ್ತಿರ ಸುಮಾರು 2 ಕೋಟಿ ವೆಚ್ಚದ ಸಿಮೆಂಟ್ ರಸ್ತೆಯ ಕಾಮಗಾರಿ ನಡೆಯುತ್ತಿದ್ದು , ಅಲ್ಲಿನ ಅಕ್ಕಪಕ್ಕದ ಮನೆಗಳಿರುವ ಡಾಂಬರ್ ರಸ್ತೆಗಳು ಹಾಳಾಗಿದ್ದು ಅಲ್ಲಿನ ನಿವಾಸಿಗಳ ಕೋರಿಕೆಯ ಮೇರೆಗೆ ಸ್ಥಳ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತುರ್ತಾಗಿ ಹಾಳಾದ ಡಾಂಬರ್ ರಸ್ತೆಗಳನ್ನು ದುರಸ್ತಿ ಮಾಡಿಕೊಡಬೇಕೆಂದು ಒತ್ತಾಯಿಸಿದ್ದೆವು ಬಳಿಕವೂ ಯಾವುದೇ ಕ್ರಮಕೈಗೊಂಡಿಲ್ಲ. ವಿದ್ಯಾನಗರದ ಪಾಲಿಕೆಯ ಜಾಗದಲ್ಲಿ 10 ವರ್ಷದ ಹಿಂದೆ ಕಾಂಪೌಂಡ್ ನಿರ್ಮಿಸಲಾಗಿತ್ತು ಈ ಜಾಗ ಕಬಳಿಕೆ ಮಾಡಲಾಗಿದೆ ಆದರೆ ಆಸ್ತಿಯನ್ನು ಕಬಳಿಸಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳದೆ ಇರುವುದು ಇವರ ಆಡಳಿತ ವೈಫಲ್ಯ ತೋರಿಸುತ್ತದೆ ಇವರ ಆಡಳಿತ ವೈಫಲ್ಯದಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದರು.
ಪಾಲಿಕೆ ಸದಸ್ಯ ಇಟ್ಟಿಗುಡಿ ಮಂಜುನಾಥ್ ಮಾತನಾಡಿ ಸರ್ಕಾರದ ಅನುಮತಿ ಪಡೆಯದೆ ಆಶ್ರಯ ಮನೆ ಹಂಚಿಕೆ ಮಾಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಉದಯಕುಮಾರ್, ಪಾಮೇನಹಳ್ಳಿ ನಾಗರಾಜ್ ಇದ್ದರು.



