ದಾವಣಗೆರೆ: ಖಾತೆ ಬದಲಾವಣೆಗೆ 1.50 ಲಕ್ಷಕ್ಕೆ ಬೇಡಿಕೆ ಇಟ್ಟ ಹರಿಹರ ನಗರಸಭೆಯ ಬಿಲ್ ಕಲೆಕ್ಟರ್ ಡಿ ಮಂಜಪ್ಪ (48) ಅವರನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.
ದಾವಣಗೆರೆ ನಿವಾಸಿ ರಾಘವೇಂದ್ರ ಎಂಬುವರು ಹರಿಹರ ತಾಲ್ಲೂಕಿನ ಗುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರ್ಲಾಪುರ ಗ್ರಾಮದ ರಿ.ಸ.ನಂ 39/3 ರಲ್ಲಿ ಸೈಟ್ ನಂಬರ್ 7ರಲ್ಲಿನ 80*50 ಅಡಿ ಉದ್ದಗಲದ ನಿವೇಶನವನ್ನು ಖಾತೆ ಬದಾಲಾವಣೆ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಬಿಲ್ ಕಲೆಕ್ಟರ್ ಡಿ ಮಂಜಪ್ಪ ರೂ.1,50,000/-ಗಳ ಲಂಚದ ಬೇಡಿಕೆ ಇಟ್ಟಿದ್ದು, ದಿ: 06.04.2022 ರಂದು ರೂ.1,00,000/-ಲಂಚದ ಹಣ ಸ್ವೀಕರಿಸಿ ಹಣದ ಸಮೇತ ಸಿಕ್ಕಿಬಿದಿದ್ದರು. ಲಂಚದ ಹಣವನ್ನು ಸ್ವೀಕರಿಸಿರುವುದು ದಾಳಿ ಸಮಯದಲ್ಲಿ ಸಾಬೀತಾಗಿರುತ್ತದೆ. ಹೀಗಾಗಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಕೆ.ಸಿ.ಎಸ್(ಸಿಸಿಎ) ನಿಯಮಾವಳಿ 1957ರ ನಿಯಮ(10)ರಡಿ ಮತ್ತು ಸರ್ಕಾರದ ಉಲ್ಲೇಖಿತ (1)ರ ಆದೇಶದಲ್ಲಿ ಪ್ರತ್ಯಾಯೋಜಿಸಿರುವ ಅಧಿಕಾರವನ್ನು ಚಲಾಯಿಸಿ ಹರಿಹರ ನಗರಸಭೆಯ ಕರವಸೂಲಿಗಾರ ಡಿ.ಮಂಜಪ್ಪ ಇವರನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ನಿಲಂಬನೆಯಲ್ಲಿಟ್ಟು ಆದೇಶಿಸಿದ್ದಾರೆ.



