ದಾವಣಗೆರೆ: ದೇವರ ಉತ್ಸವ ವಿಚಾರದಲ್ಲಿ ಎರಡು ಗ್ರಾಮಗಳ ಜನರ ನಡುವೆ ಮಾರಾಮಾರಿ ನಡೆದಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲೆಯ ನ್ಯಾಮತಿ ತಾಲೂಕಿನ ಬಸವನಹಳ್ಳಿ ಮತ್ತು ಮಾದನಭಾವಿ ಗ್ರಾಮಸ್ಥರ ನಡುವೆ ಮಾರಾಮಾರಿ ನಡೆದಿದೆ. ಬಸವನಹಳ್ಳಿ ಮತ್ತು ಮಾದನಬಾವಿ ಗ್ರಾಮದವರ ನಡುವೆ ಯುಗಾದಿ ಹಬ್ಬದ ನಂತರ ಪೂಜೆ ಕಾರ್ಯಕ್ರಮದ ವೇಳೆ ಗಲಾಟೆಯಾಗಿದೆ.
20 ವರ್ಷಗಳ ಹಿಂದೆ ಗಲಾಟೆ ನಡೆದು ಕೋರ್ಟ್ ಮೆಟ್ಟಿಲೇರಿದ್ದರು. 20 ನಿಮಿಷದೊಳಗೆ ಬಸವನಾಳ ಗ್ರಾಮದಿಂದ ಉತ್ಸವ ಹೊರಗೆ ಹೋಗಬೇಕು ಎಂದು ನ್ಯಾಯಾಲಯ ಆದೇಶ ನೀಡಿತ್ತು. ಎರಡು ಗಂಟೆ ಕಳೆದರೂ ಉತ್ಸವ ಗ್ರಾಮ ಬಿಟ್ಟು ಹೋಗದ ಹಿನ್ನೆಲೆಯಲ್ಲಿ ಜಗಳವಾಡಿದ್ದಾರೆ.
ಗೋವಿನಕೋವಿ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಪರಸ್ಪರ ಕಲ್ಲೆಸೆತ ನಡೆದಿದೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.



