ದಾವಣಗೆರೆ: ಹಳೇ ದಾವಣಗೆರೆ ಅಭಿವೃದ್ಧಿಪಡಿಸುವಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ನಿರ್ಲಕ್ಷ ವಹಿಸಿದ್ದು, ತಮ್ಮ ಹಿಂಬಾಲಕರಿಗಷ್ಟೇ ಆಶ್ರಯ ಮನೆಗಳನ್ನು ಹಂಚಿಕೆ ಮಾಡಿದ್ದಾರೆ ಎಂದು ನಾಗರಿಕ ಮೂಲಸೌಕರ್ಯ ಹೋರಾಟ ಸಮಿತಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಜಿಲ್ಲಾ ಸಂಚಾಲಕ ಜೆ ಅಮಾನುಲ್ಲಾ ದೂರಿದರು.
ಕಳೆದ ನಲವತ್ತು ವರ್ಷಗಳಿಂದ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ವಾಸಿಸುತ್ತಿರುವ ನಿರ್ಗತಿಕ ಕುಟುಂಬಗಳ ಬಡಾವಣೆಗಳಾದ ಹೆಗ್ಡೆ ನಗರ ಮತ್ತು ಚಂದ್ರೋದಯ ಬಡಾವಣೆಯಲ್ಲಿ ಒಂದು ವಾರದೊಳಗಾಗಿ ಮೂಲಭೂತ ಸೌಲಭ್ಯ ಕಲ್ಪಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು. ದಾವಣಗೆರೆ ಮಹಾನಗರ ಸ್ಮಾರ್ಟ್ ಸಿಟಿಯಾಗಿ ಆಯ್ಕೆಗೊಂಡು ಅತಿವೇಗದಿಂದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ ಆದರೆ ಹಳೇ ಭಾಗದ ಹೆಗ್ಡೆನಗರ ಚಂದ್ರೋದಯ ನಗರದಲ್ಲಿ ರಿಂಗ್ ರಸ್ತೆ ಬಳಿ ಸುಮಾರು ನಲವತ್ತು ವರ್ಷಗಳಿಂದ ಇರುವ 395 ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದರೂ ಸಹ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ಪ್ರಾಣಿಗಳಂತೆ ವಾಸ ಮಾಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
2500ಕ್ಕೂ ಹೆಚ್ಚು ಜನ ವಾಸ ಮಾಡುತ್ತಿರುವ ಈ ವಿಭಾಗದಲ್ಲಿ ಕಳೆದ ನಲವತ್ತು ವರ್ಷಗಳಿಂದಲೂ ಅಭಿವೃದ್ಧಿ ಕಂಡಿಲ್ಲ ಕಾರಣ ಪಾಲಿಕೆ ಅಧಿಕಾರಿಗಳು ಒಂದು ವಾರದೊಳಗಾಗಿ ಮೂಲಭೂತ ಸೌಲಭ್ಯ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಅವರ ವಿರುದ್ಧ ನ್ಯಾಯಾಲಯದ ಮೊರೆ ಹೋಗಲಾಗುವುದು. ವಸತಿ ಇಲ್ಲದವರಿಗೆ ವಸತಿ ನೀಡುವ ಉದ್ದೇಶದಿಂದಾಗಿ ದಾವಣಗೆರೆ ಹಾಗೂ ದೊಡ್ಡಬಾತಿ ಗ್ರಾಮದಲ್ಲಿ ಈಗಾಗಲೇ ಭೂಮಿಯನ್ನು ಖರೀದಿಸಿದ್ದು ನಿರಾಶ್ರಿತರಿಗೆ ಶಾಶ್ವತ ಸೂರು ಕಲ್ಪಿಸಲು ಹಾಗೂ ಇಲ್ಲಿನ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಜಿಲ್ಲಾಡಳಿತದ ಕಚೇರಿಗೆ ಮುತ್ತಿಗೆ ಹಾಕಿ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಒತ್ತಾಯಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಟಿ ಅಜ್ಗರ್ ಮನ್ಸೂರಲಿ ಸಲೀಂ ಬಶೀರ್ ಅಹ್ಮದ್ ಖಾದರ್ ಬಾಷಾ ಸಾಹೇಬ್ ಇದ್ದರು.



