ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಗರದ ಹೊರ ವಲಯದ ಕುಂದುವಾಡ ಗ್ರಾಮದಲ್ಲಿ ವಸತಿ ಪ್ರದೇಶ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ವಸತಿ ಪ್ರದೇಶಕ್ಕೆ ಅಗತ್ಯವಾದ ಜಮೀನನ್ನು ರೈತರಿಂದ ಖರೀದಿಸಲು ನಿರ್ಧರಿಸಿದ್ದು, ಒಂದು ಎಕರೆಗೆ 1.18 ಕೋಟಿ ದರ ನೀಡಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಧೂಡಾ ಅಧ್ಯಕ್ಷ ದೇವರಮನನಿ ಶಿವಕುಮಾರ್ ನೇತೃತ್ವದಲ್ಲಿ ಜಮೀನು ಖರೀದಿ ದರ ನಿಗದಿಮಾಡಲಾಯಿತು. ಕುಂದುವಾಡ ಗ್ರಾಮದ ವಿವಿಧ ಸರ್ವೆ ನಂಬರ್ ನ ಒಟ್ಟು 53 ಎಕರೆ 19.8 ಗುಂಟೆ ಪ್ರದೇಶದಲ್ಲಿ ವಸತಿ ಯೋಜನೆ ಅಭಿವೃದ್ಧಿಪಡಿಸಲು ಧೂಡಾ ಯೋಜನೆ ರೂಪಿಸಿದೆ. ಇಂದು ಜಮೀನು ದರ ನಿಗದಿ ಬಗ್ಗೆ ಆ ಭಾಗದ ರೈತರೊಂದಿಗೆ ಜಿಲ್ಲಾಧಿಕಾರಿ ಚರ್ಚೆ ನಡೆಸಿದರು. ಅಂತಿಮವಾಗಿ ಎಕೆರೆಗೆ 1 ಕೋಟಿ 18 ಲಕ್ಷ ನೀಡಲು ಅನುಮೋದನೆ ನೀಡಲಾಯಿತು.
ಸಭೆಯಲ್ಲಿ ಧೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ತಹಶೀಲ್ದಾರ್ ಗೀರೀಶ್, ಧೂಡಾ ಸದ್ಸಯರಾದ ಮಾರುತಿರಾವ್ ಘಾಟ್ಗೆ, ಲಕ್ಷ್ಮಣ, ಬಾತಿ ಚಂದ್ರಶೇಖರ್, ಗೌರಮ್ಮ ವಿ. ಪಾಟೀಲ್, ರೈತ ಮುಖಂಡ ಜಿ.ಸಿ . ದೇವರಾಜ್, ಎಂ. ಹನುಮಂತಪ್ಪ, ಷಣ್ಮುಖಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



