ಜನರಲ್ಲಿನ ಅಜ್ಞಾನ ನಿವಾರಣೆಯಾಗಿ ಆತ್ಮಜ್ಞಾನ ಮೂಡಿದೆಯೇ? ಬದುಕು ಕತ್ತಲಿಂದ ಬೆಳಕಿನೆಡೆಗೆ ಸಾಗಿದೆಯೇ? ದೀಪದ ಬುಡದಲ್ಲೇ ಕತ್ತಲು ಎನ್ನುವಂತೆ ಮನುಷ್ಯನ ಅಂತರಂಗ ಮತ್ತು ಬಹಿರಂಗದ ಪಟಾಕಿಗಳ ಸದ್ದು ಅಡಗಿಲ್ಲದಿರುವುದು ವಿಷಾದನೀಯಯವಾಗಿದ್ದು ಎಲ್ಲರೂ ಆತ್ಮಾವಲೋಕಿಸುವ ಅಗತ್ಯವಿರುವುದಾಗಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಪತಿ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಅಭಿಪ್ರಾಯ ವ್ಯಕ್ತಪಡಿಸಿದರು.
ತಮ್ಮ ಗುರುವರ್ಯರಾದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಕರ್ತೃತ್ವ ಶಕ್ತಿ ಗದ್ದುಗೆಯ ಪವಿತ್ರ ಸನ್ನಿಧಿಯಾದ ಐಕ್ಯಮಂಟಪದಲ್ಲಿ ಪ್ರತಿ ವರ್ಷದ ಪರಂಪರೆಯಂತೆ ಲಿಂಗೈಕ್ಯ ಗುರುವರ್ಯರ ಗದ್ದುಗೆಗೆ ಪುಷ್ಪ ನಮನ ಸಲ್ಲಿಸಿ ಶಿವ ಹಣತೆಯನ್ನು ಬೆಳಗುವ ಮೂಲಕ ದೀಪಗಳ ಹಬ್ಬಕ್ಕೆ ಪೂಜ್ಯರು ಚಾಲನೆ ನೀಡಿ, ದೀಪಾವಳಿಯ ದೀಪ ವಿತರಣೆಯ ಸಂದರ್ಭದಲ್ಲಿ ಆಶಯದ ನುಡಿ ದಯಪಾಲಿಸಿದ ಪೂಜ್ಯರು ಅಸತೋಮಾ ಸದ್ಗಮಯಾ, ತಮಸೋ ಮಾ ಜ್ಯೋತಿರ್ಗಮಯ, ಬೆಳಕಿನ ಹಬ್ಬ ದೀಪಾವಳಿ, ನಮ್ಮ ಜೀವನದ ಕಷ್ಟಗಳನ್ನು ಹೊಡೆದೋಡಿಸಿ ಬೆಳಕನ್ನು ಕಂಡು ಸಂಭ್ರಮಿಸುವಂತಹ ವಿಶೇಷ ಹಬ್ಬ. ಇಲ್ಲಿ ಮನುಷ್ಯನಲ್ಲಿರುವ ಅಂಧಕಾರ, ಅಜ್ಞಾನ, ಬುದ್ಧಿ, ಆಚಾರ, ವಿಚಾರಗಳಿಗೆ ಅಂಟಿಕೊಂಡಿರುವಂತಹ ಕತ್ತಲೆಯನ್ನು ಹೋಗಲಾಡಿಸುವಂತಹದ್ದು ಎಂಬರ್ಥವು ಇದೆ. ಜೀವನದ, ಮನದ ಎಲ್ಲಾ ಋಣಾತ್ಮಕ ಅಂಶಗಳನ್ನು ಹೋಗಲಾಡಿಸಲು ದೀಪ ದಾರಿದೀಪವಾಗಲಿದೆ ಎಂದು ಆಶಿಸಿದರು.
ಸಭೆ ಸಮಾರಂಭಗಳಲ್ಲಿ ಹಣತೆ ಹಚ್ಚುವುದು ಬಹಳ ಕಷ್ಟ, ಈ ದೇಶದಲ್ಲಿ ಮಾತಿನ ಚಕಮಕಿಯಿಂದ ಬೆಂಕಿ ಹಚ್ಚುವುದು ಬಹಳ ಸುಲಭ. ಸಭೆಯ ಆರಂಭದಲ್ಲಿ ದೀಪವನ್ನು ಬೆಳಗಿಸುವುದು ಸವಾಲಿನ ಕೆಲಸವಾದರೂ ಕಷ್ಟಪಟ್ಟು ಹಚ್ಚುತ್ತೇವೆ. ಕೇವಲ ಯಾಂತ್ರಿಕವಾಗಿ ಹಚ್ಚಿ ವೇದಿಕೆಯಲ್ಲಿ ಆಸೀನರಾಗಲು ನಮಗೆ ಮನಸ್ಸಾಗುವುದಿಲ್ಲ. ಸಮಾರಂಭ ಮುಗಿಯುವ ತನಕ ದೀಪವು ಬೆಳಗುತ್ತಿರಬೇಕೆಂಬ ನಮ್ಮ ಹಂಬಲವು ಕೇವಲ ಹಂಬಲವಾಗಿ ಉಳಿದ ಸಂದರ್ಭಗಳೇ ಹೆಚ್ಚು! ಗಾಳಿಯ ಹೊಡೆತಕ್ಕೆ ಅದು ಆರಿಹೋಗಿ ದೀಪ ಬೆಳಗಿಸುವ ಶಾಸ್ತ್ರ ಮುಗಿದ ನಂತರ ಮಂಕುಕವಿದ ದೀಪವನ್ನು ಸಂಘಟಕರು ಎತ್ತಿಡುತ್ತಾರೆ.
ಅವರು ದೀಪ ಎತ್ತಿಟ್ಟರೆ ಶ್ರೋತೃಗಳು ಸಭೆಯಲ್ಲಿ ಕೇಳಿದ ಜೀವನಕ್ಕೆ ಬೆಳಕಾಗುವ ಉನ್ನತ ವಿಚಾರಗಳನ್ನು ಕೇವಲ ಯಾಂತ್ರಿಕವಾಗಿ ಕೇಳಿಸಿಕೊಂಡು ಮೃಷ್ಟಾನ್ನ ಭೋಜನ ಸವಿದ ಮೇಲೆ ಅಲ್ಲಿಯೇ ಮರೆತು ಬಾಯಿ ಚಪ್ಪರಿಸುತ್ತಾ ನಿರ್ಗಮಿಸುತ್ತಾರೆ! ಆದರೂ ನಿರಾಶರಾಗದೆ ತಾಯಿಯು ಹಠಮಾರಿ ಮಗುವಿನ ಕೈಗಳನ್ನು ಬಿಗಿಯಾಗಿ ಹಿಡಿದು ಬಲವಂತವಾಗಿ ಒಳಲೆಯಲ್ಲಿ ಹಾಲುಣಿಸುವ ಪ್ರಯತ್ನ ನಮ್ಮದಾಗಿದೆ ಎಂದು ನುಡಿದರು.
ಮನೆ- ಮನೆಗಳಲ್ಲಿ ಹಚ್ಚುವ ದೀಪದ ಬೆಳಕು ಜ್ಞಾನದ ಸಂಕೇತ; ಕತ್ತಲು ಅಜ್ಞಾನದ ಸಂಕೇತ.ಶತಮಾನಗಳಿಂದ ಗಿಳಿಪಾಠ ಹೇಳಿದ್ದೇ ಹೇಳಿದ್ದು. ನಮ್ಮ ಅಜ್ಞಾನ ನಿವಾರಣೆಯಾಗಿ ಆತ್ಮಜ್ಞಾನ ಮೂಡಿದೆಯೇ? ನಮ್ಮ ಬದುಕು ಕತ್ತಲಿಂದ ಬೆಳಕಿನೆಡೆಗೆ ಸಾಗಿದೆಯೇ?
ದೀಪದ ಬುಡದಲ್ಲೇ ಕತ್ತಲು. ಪಟಾಕಿಗಳ ಸದ್ದು ಅಡಗಲಿಲ್ಲ. ದೀಪ ಹಚ್ಚಿದ್ದಕ್ಕಿಂತ ಪಟಾಕಿ ಹೊಡೆದಿದ್ದೇ ಜಾಸ್ತಿ, ನಮಗೆ ತಿಳಿದಿರುವ ಮಟ್ಟಗೆ ರಾಮಾಯಣ,ಮಹಾಭಾರತ ಇತ್ಯಾದಿ ಪ್ರಾಚೀನ ಗ್ರಂಥಗಳಲ್ಲಿ ದೀಪಾವಳಿಯಂದು ದೀಪಗಳನ್ನು ಹಚ್ಚಿದ ಉಲ್ಲೇಖವಿದೆಯೇ ಹೊರತು ಎಲ್ಲೂ ಪಟಾಕಿಗಳನ್ನು ಸಿಡಿಸಿದ ಉಲ್ಲೇಖವಿಲ್ಲ. ಗಡಿಪ್ರದೇಶಗಳಲ್ಲಿ ಶತ್ರುಸೈನಗಳ ಮಧ್ಯೆ ನಡೆಯುವ ಮದ್ದುಗುಂಡುಗಳ ಆರ್ಭಟವನ್ನೂ ನಾಚಿಸುವಷ್ಟು ಪೇಟೆಪಟ್ಟಣಗಳಲ್ಲಿ ಪಟಾಕಿಗಳ ಭೀಕರ ಸದ್ದು! ಇದೇನು ದೀಪಾವಳಿಯೋ, ಪಟಾಕಿಗಳ ಹಾವಳಿಯೋ, ನಮ್ಮ ಸಾಂಸ್ಕೃತಿಕ ಪರಂಪರೆಯ ದಿವಾಳಿಯೋ? ದೀಪಾವಳಿಯನ್ನು ಕುರಿತು ಬಹಳ ಹಿಂದೆ ಬರೆದ ಕೆಳಗಿನ ಕವಿತೆಯನ್ನು ಶ್ರೀ ಜಗದ್ಗುರುಗಳವರು ವಾಚಿಸಿದರು.
ಮತ್ಸರದ ಸುರುಸುರು ಬತ್ತಿ
ಹತ್ತಿ ಉರಿಯುತಿದೆ ಸುತ್ತಲೂ ಮತ್ಸರದ
ಸುರುಸುರು ಬತ್ತಿ
ಹಚ್ಚಲಾದೀತೇ ಅದರಿಂದ ಮತ್ತೊಂದು
ಹಣತೆಯ ಬತ್ತಿ!
ಹಣತೆ ಹಣತೆಯ ಕೂಡಿದರೆ
ಕಂಗೊಳಿಸುವುದು ಜ್ಯೋತಿ
ಹಣತೆ ಬರುಸಿನ ಕುಡಿಕೆಯ ಕೂಡಿದರೆ
ಉಗುಳುವುದು ಬೆಂಕಿ
ಯಾರ ಬದುಕಿನ ಅಂಗಳದಲ್ಲಿ ಯಾರು
ಇಡುವರೋ ಬತ್ತಿ
ಅದು ಸಿಡಿದಾಗಲೇ ಗೊತ್ತು
ಬತ್ತಿ ಇಟ್ಟವನ ಕುಯುಕ್ತಿ!
ಸುಳಿಯದಿರು ಸತ್ತಂತಿಹ ಪಟಾಕಿಗಳಿದ್ದಡೆಯಲ್ಲಿ
ಸಿಡಿಯುವುದು ಜೋಕೆ ನಿನ್ನ ಕಣ್ಣಾಲಿ!
ಮತ್ತೆಂದೂ ಕಾಣಲಾರೆ ಮುಂದಿನ ದೀಪಾವಳಿ!
ಹಣತೆಯ ದೀಪಗಳ ಜೊತೆ ವಿದ್ಯುತ್ ಚಾಲಿತ ಬಣ್ಣ ಬಣ್ಣದ ದೀಪಗಳ ಪ್ರಕಾಶದಲ್ಲಿ ತರಳಬಾಳು ಬೃಹನ್ಮಠವು ಬೆಳಗುತ್ತಿರುವ ದೃಶ್ಯವು ನಯನ ಮನೋಹರದ ಜೊತೆಯಲ್ಲಿ ಹಬ್ಬದ ಸಂಭ್ರಮವನ್ನು ನೂರ್ಮ್ಮಡಿಗೊಳಿಸಿತ್ತು. ಸಿರಿಗೆರೆ ಹಾಗೂ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು, ವಿದ್ಯಾರ್ಥಿಗಳು ಬೃಹನ್ಮಠಕ್ಕೆ ಆಗಮಿಸಿ ಶ್ರೀ ಜಗದ್ಗುರುಗಳವರ ಅಮೃತ ಹಸ್ತದಿಂದ ಬೆಳಗುವ ದೀಪ ಪಡೆದು ಆ ದೀಪದಿಂದ ತಮ್ಮ ಮನೆಯಲ್ಲಿ ದೀಪಾವಳಿಯ ದೀಪಗಳನ್ನು ಬೆಳಗುವ ಆಚರಣೆಯನ್ನು ಶ್ರದ್ದಾ ಭಕ್ತಿಯಿಂದ ಆಚರಿಸಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್.ಕೆ.ಬಿ, ಅಣ್ಮನಬಳಗದ ಅಧ್ಯಕ್ಷರಾದ ಬಿ.ಎಂ.ಮರುಳಸಿದ್ಧಯ್ಯ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.