ಬೆಂಗಳೂರು: ತಾಂತ್ರಿಕ ತೊಂದರೆಯಿಂದ ಕೋಟಿಗೊಬ್ಬ-3 ಚಿತ್ರದ ಮೊದಲ ಶೋ ರದ್ದಾಗಿದ್ದಕ್ಕೆ ನಟ ಕಿಚ್ಚ ಸುದೀಪ್ ಅವರು ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕಾರಣಾಂತರಗಳಿಂದ ಕೋಟಿಗೊಬ್ಬ-3 ಚಿತ್ರ ಬಿಡುಗಡೆ ವಿಳಂಬವಾಗುತ್ತಿದೆ. ಅದರೆ ಅಭಿಮಾನಿಗಳು ತಾಳ್ಮೆಯಿಂದ ವರ್ತಿಸಬೇಕು ಎಂದಿದ್ದಾರೆ.
ಚಿತ್ರ ಬಿಡುಗಡೆ ವಿಳಂಬಕ್ಕೂ ಚಿತ್ರಮಂದಿರಗಳಿಗೂ ಯಾವುದೇ ರೀತಿಯ ಸಂಬಂಧವಿಲ್ಲ, ಥಿಯೇಟರ್ ಗಳ ಮುಂದೆ ಗಲಾಟೆ ಮಾಡದಂತೆ ಸುದೀಪ್ ಮನವಿ ಮಾಡಿದ್ದಾರೆ. ‘ಈಗಾಗಲೇ ಥಿಯೇಟರ್ಗಳ ಬಳಿ ಆಗಮಿಸಿರುವ ಎಲ್ಲ ಅಭಿಮಾನಿಗಳಿಗೂ ಶೋ ತಡವಾದ ಬಗ್ಗೆ ತಿಳಿಸುವುದು ನನ್ನ ಕರ್ತವ್ಯವಾಗಿದೆ. ಥಿಯೇಟರ್ ನಲ್ಲಿ ಸಿನಿಮಾ ಇದೆ. ಆದರೆ ತಾಂತ್ರಿಕ ಸಮಸ್ಯೆಯಿಂದ ಸಿನಿಮಾ ತೋರಿಸಲು ಆಗುತ್ತಿಲ್ಲ ಎಂದು ತಿಳಿಸಿದ್ಧಾರೆ.
ಕೆಲವರ ಬೇಜವಾಬ್ದಾರಿಯಿಂದ ಈ ರೀತಿ ಆಗಿದೆ. ಸಿನಿಮಾ ಮತ್ತೆ ಯಾವಾಗ ಪ್ರದರ್ಶನ ಆಗುತ್ತೆ ಅನ್ನೋದನ್ನ ಮತ್ತೆ ನಾನು ನಿಮಗೆ ತಿಳಿಸ್ತಿನಿ. ಹೊಸ ಸಮಯ ತಿಳಿಸುವುದು ನನ್ನ ಕರ್ತವ್ಯ ಅಲ್ಲಿಯವೆಗೂ ನೀವೆಲ್ಲ ತಾಳ್ಮೆಯಿಂದ ಇರಿ, ಸಿನಿಮಾ ರಿಲೀಸ್ ಆಗಿಲ್ಲ ಅಂತ ಥಿಯೇಟರ್ ಗಳಿಗೆ ಹಾನಿ ಮಾಡಬೇಡಿ. ಈ ಸಮಸ್ಯೆಗೆ ಕಾರಣಕರ್ತರಾದವರ ಪರವಾಗಿ ನಾನು ವೈಯಕ್ತಿಕವಾಗಿ ಕ್ಷಮೆ ಯಾಚಿಸುತ್ತೇನೆ ಎಂದು ತಿಳಿಸಿದ್ಧಾರೆ.



