ದಾವಣಗೆರೆ: ದಾವಣಗೆರೆ ಕ್ಯಾನ್ಸರ್ ಫೌಂಡೇಶನ್ ಜನ ಜಾಗೃತಿಗಾಗಿ ಕ್ಯಾನ್ಸರ್ ನಡೆ – 2021 ಅಭಿಯಾನವನ್ನು ಇದೇ ಅಕ್ಟೋಬರ್ 10ರ ಭಾನುವಾರ ಬೆಳಿಗ್ಗೆ 8ರಿಂದ ನಗರದ ಟಿ.ವಿ. ಸ್ಟೇಷನ್ ವಿಮಾನ ಮಟ್ಟಿಯಲ್ಲಿ ಆಯೋಜಿಸಲಾಗಿದೆ ಎಂದು ಫೌಂಡೇಷನ್ ಟ್ರಸ್ಟೀ ಡಾ.ಎ.ಎಂ. ಶಿವಕುಮಾರ್ ಹಾಗೂ ಕಾರ್ಯದರ್ಶಿ ಡಾ.ಸುನೀಲ್ ಬ್ಯಾಡಗಿ ತಿಳಿಸಿದ್ದಾರೆ.
ಗ್ರೇಸ್ ಫೌಂಡೇಶನ್ ಹೈದರಾಬಾದ್, ದಾವಣಗೆರೆಯ ರೆಡ್ ಕ್ರಾಸ್ ಸಂಸ್ಥೆ, ಐ.ಎಂ.ಎ ದಾವಣಗೆರೆ, ಲೈಫ್ ಲೈನ್, ದಾವಣಗೆರೆ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಗೆಳೆಯರು ಪ್ರತಿಷ್ಠಾನ, ಭಾರತೀಯ ವಿಕಾಸ ಪರಿಷತ್ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟ, ಮುಂತಾದವರ ಸಹಯೋಗದೊಂದಿಗೆ ನಡೆಯಲಿರುವ ಈ ಅಭಿಯಾನವನ್ನು ದಾವಣಗೆರೆಯ ಮೇಯರ್ ಶ್ರೀ ಎಸ್.ಟಿ. ವೀರೇಶ್ ಉದ್ಘಾಟಿಸಲಿದ್ದಾರೆ.
ಮಹಾನಗರ ಪಾಲಿಕೆಯ ಆಯುಕ್ತ ಶ್ರೀ ವಿಶ್ವನಾಥ್ ಮುದ್ದಜ್ಜಿ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ದಾವಣಗೆರೆ ಕ್ಯಾನ್ಸರ್ ಫೌಂಡೇಶನ್ ಅಧ್ಯಕ್ಷ ಡಾ. ಶ್ರೀಶೈಲ ಬ್ಯಾಡಗಿ ಇವರ ನೇತೃತ್ವದಲ್ಲಿ ನಡೆಯಲಿರುವ ಈ ಅಭಿಯಾನದಲ್ಲಿ ಆಸಕ್ತರು ಟಿ.ವಿ. ಸ್ಟೇಷನ್ ನೀರು ಸಂಗ್ರಹಗಾರದ ಸುತ್ತ ನಡಿಗೆಯ ಮೂಲಕ ಪಾಲ್ಗೊಳ್ಳಲಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಭಾಗವಹಿಸಲಿರುವ ಆಸಕ್ತರಿಗೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸೂಚಿಸಲಾಗಿದೆ. ಪರೋಕ್ಷ ನಡೆಯಲ್ಲಿ ಭಾಗವಹಿಸುವವರು ತಾವು ಇರುವ ಸ್ಥಳದಲ್ಲಿ ನಡಿಗೆ ಮಾಡಿ ಅದರ 30ಸೆಕೆಂಡ್ ಸೆಲ್ಫೀ ವಿಡಿಯೋವನ್ನು ದಾವಣಗೆರೆ ಕ್ಯಾನ್ಸರ್ ಫೌಂಡೇಶನ್ ಫೇಸ್ ಬುಕ್ ಪೇಜಿಗೆ ಲಗತ್ತಿಸಲು ಫೌಂಡೇಶನ್ ರಾಯಭಾರಿ ಅರುಣ್ ಕುಮಾರ್ ಆರ್.ಟಿ. ಮನವಿ ಮಾಡಿದ್ದಾರೆ.



