ದಾವಣಗೆರೆ: ಕೊರೊನಾ ಲಸಿಕೆ ಬಗ್ಗೆ ಯಾವುದೇ ತಪ್ಪು ಗ್ರಹಿಕೆಗೆ ಕಿವಿಗೋಡಬೇಡಿ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕರೆ ನೀಡಿದರು.
ಇತ್ತೀಚೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಸುಬಿಕ್ಷಾ ಫೌಂಡೇಷನ್ ಆಯೋಜಿಸಿದ್ದ ಕೊರೊನಾ ಲಸಿಕಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ಸೋಂಕಿನ ಸಂಖ್ಯೆ ಮತ್ತೆ ಹೆಚ್ಚಳವಾಗುತ್ತಿದೆ. ಹೀಗಾಗಿ ಸಾರ್ವಜನಿರು ಯಾವುದೇ ತಪ್ಪು ಗ್ರಹಿಕೆಗೆ ಕಿವಿಗೊಡದೇ ಧೈರ್ಯದಿಂದ ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು.

ಆರೋಗ್ಯ ಇಲಾಖೆ ಕೆಲವು ಎನ್ ಜಿಒಗಳ ಸಹಯೋಗದೊಂದಿಗೆ ಲಸಿಕೆ ಅಭಿಯಾನ ನಡೆಸುತ್ತಿದೆ. ಇಂದು ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ದುರ್ಗಾಂಬಿಕ ದೇವಸ್ಥಾನದ ಧರ್ಮದರ್ಶಿ ಗೌಡ್ರು ಚನ್ನಬಸಪ್ಪ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತ್ ರಾವ್ ಜಾಧವ್ ಅವರು ಸೇರಿದಂತೆ ಅನೇಕ ಸಾರ್ವಜನಿಕರು ಲಸಿಕೆ ಹಾಕಿಸಿಕೊಂಡರು. ನೀವು ಕೂಡ ನಿಮ್ಮ ಸುತ್ತಮುತ್ತಲಿನವರನ್ನು ಕರೆ ತಂದು ಲಸಿಕೆ ಹಾಕಿಸಿ ಎಂದು ಸಾರ್ವಜನಿಕರಿಗೆ ಡಿಸಿ ಕರೆ ನೀಡಿದರು. ಒಟ್ಟು 30 ಜನರು ಕೊರೊನಾ ಲಸಿಕೆ ಹಾಕಿಸಿಕೊಂಡರು.



