ಡಿವಿಜಿ ಸುದ್ದಿ. ದಾವಣಗೆರೆ: ಒಣ ಕಸ, ಹಸಿ ಕಸ, ಇ- ತ್ಯಾಜ್ಯ, ಮೆಡಿಕಲ್ ತ್ಯಾಜ್ಯ ..ಹೀಗೆ ಪ್ರತಿಯೊಂದು ಕಸವನ್ನು ವಿಂಗಡಿಸಿ ಹಾಕಬೇಕು. ಆದ್ರೆ, ಈ ನಿಯಮ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಪಾಲನೆಯಾಗುತ್ತಿಲ್ಲ..
ದಾವಣಗೆರೆ ಶಿಕ್ಷಣ ಕಾಶಿಯ ಜೊತೆಗೆ ವೈದ್ಯಕೀಯ ಕ್ಷೇತ್ರದಲ್ಲಿಯೂ ಸಾಕಷ್ಟು ಹೆಸರು ಮಾಡಿದ ಜಿಲ್ಲೆ. ಇಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಸುತ್ತಮುತ್ತಲಿನ ಪ್ರದೇಶದ ಜನರು ಜಿಲ್ಲಾ ಆಸ್ಪತ್ರೆಗೆ ಬರ್ತಾರೆ. ಹೀಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿ ದಿನ ಸಾಕಷ್ಟು ಪ್ರಮಾಣದಲ್ಲಿ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಹೀಗೆ ಉತ್ಪತ್ತಿಯಾದ ಅತ್ಯಂತ ಅಪಾಯಕಾರಿ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವಲ್ಲಿ ಜಿಲ್ಲಾ ಆಸ್ಪತ್ರೆ ವಿಫಲವಾಗಿದೆ.
ಸಾಮಾನ್ಯ ಕಸದ ಜೊತೆಗೆ ನೀಡಲ್, ಸಿರೇಂಜ್, ಗ್ಲೂಕೂಸ್ ಬಾಟಲ್ ಗಳು ಕಸ ವಿಲೇವಾರಿ ಘಟಕಕ್ಕೆ ಸೇರುತ್ತಿವೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರು ದಾಳಿ ಮಾಡಿ ಜಿಲ್ಲಾ ಆಸ್ಪತ್ರೆಯ ಮೆಡಿಕಲ್ ತ್ಯಾಜ್ಯದ ದೃಶ್ಯವಾವಳಿಯನ್ನು ಸೆರೆ ಹಿಡಿದಿದ್ದಾರೆ.
ಆಸ್ಪತ್ರೆಯ ಸಿಬ್ಬಂದ್ದಿಗಳು ಸೂಕ್ತವಾಗಿ ವಿಲೇವಾರಿ ಮಾಡುತಿಲ್ಲ ಎಂಬ ದೂರಿನ ಅನ್ವಯ, ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿದರೂ ಸೂಕ್ತ ಕ್ರಮ ಜರುಗುತ್ತಿಲ್ಲ. ಇಂತಹ ಘಟನೆಗಳು ಪದೇ ಪದೇ ಮರುಕಳುಸುತ್ತಿದೆ. ಈ ಬಗ್ಗೆ ಸರಿಪಡಿಸುವಂತೆ ಜಿಲ್ಲಾ ಆಸ್ಪತ್ರೆಯ ಸರ್ಜನ್ ಅವರಿಗೂ ಸೂಚನೆ ನೀಡಿದರು ಕ್ರಮ ಕೈಗೊಳ್ಳುತ್ತಿಲ್ಲ.
ಇನ್ನು ಸಣ್ಣ ಸಣ್ಣ ಕ್ಲಿನಿಕ್ ಗಳು ಸಾಮಾನ್ಯ ಕಸದ ಜೊತೆಗೆ ಮೆಡಿಕಲ್ ತ್ಯಾಜ್ಯ ಸೇರಿಸಿ ಹಾಕುತ್ತಿದ್ದಾರೆ. ಎಲ್ಲೆಂದರಲ್ಲಿ ಕಸ ಇಟ್ಟು ಹೋಗುತ್ತಿದ್ದಾರೆ. ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಯಲ್ಲಿಯೂ ಸರಿಯಾಗಿ ನಿಯಮ ಪಾಲನೆ ಆಗುತ್ತಿಲ್ಲ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕಿದೆ ಎಂದು ದಾವಣಗೆರೆಯ ಸಾಮಾಜಿಕ ಕಾರ್ಯಕರ್ತರ ಒತ್ತಾಯಿಸಿದ್ದಾರೆ..



