ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಕೊಂಡಜ್ಜಿ ಅರಣ್ಯ ವಲಯದಲ್ಲಿ ವಿವಿಧ ಪ್ರಭೇದದ ಪ್ರಾಣಿ-ಪಕ್ಷಿಗಳಿದ್ದು, ಬೇಸಿಗೆ ಅವಧಿಯಲ್ಲಿ ಕೊಂಡಜ್ಜಿ ಕೆರೆಯಲ್ಲಿ ನೀರು ಖಾಲಿಯಾಗುವುದರಿಂದ ಪ್ರಾಣಿ-ಪಕ್ಷಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಪ್ರಾಣಿ-ಪಕ್ಷಗಳಿಗೆ ಸೂಕ್ತ ನೀರಿನ ವ್ಯವಸ್ಥೆ ಕಲ್ಪಿಸುವಂತೆ ದಾವಣಗೆರೆ ವಲಯ ಅರಣ್ಯಾಧಿಕಾರಿ ಸುರೇಶ್ ಅವರಿಗೆ ಜನ ಸಾಮಾನ್ಯರ ಸೇವಾ ಸಂಸ್ಥೆ ಅಧ್ಯಕ್ಷ ಪ್ರಸನ್ನ ಬೆಳಕೇರಿ ಮನವಿ ಸಲ್ಲಿಸಿದ್ದಾರೆ.
ಬೇಸಿಗೆ ಕಾಲ ಸಮೀಪಿಸುತ್ತಿದ್ದು, ಕೆರೆ ಕಟ್ಟೆಗಳು, ನೀರು ಸಂಗ್ರಹ ತೊಟ್ಟಿಗಳು ಖಾಲಿಯಾಗುತ್ತಿವೆ. ದಾವಣಗೆರೆ ಜಿಲ್ಲೆಯ ಪ್ರಮುಖ ಅರಣ್ಯ ಪ್ರದೇಶವಾಗಿರುವ ಕೊಂಡಜ್ಜಿ ಅರಣ್ಯ ಪ್ರದೇಶವು ಕೊಂಡಜ್ಜಿ ಕೆರೆಯನ್ನು ಅವಲಂಬಿತವಾಗಿದೆ. ಸದರಿ ಅರಣ್ಯ ಪ್ರದೇಶದಲ್ಲಿ ಹಲವಾರು ಪ್ರಭೇದದ ಪ್ರಾಣಿಗಳು, ಪಕ್ಷಿಗಳು ಸ್ವಚ್ಚಂದ ಪರಿಸರದಲ್ಲಿ ಜೀವಿಸುತ್ತಿರುತ್ತವೆ, ಅರಣ್ಯದ ಬಹುಭಾಗ ಪ್ರಾಣಿ ಪಕ್ಷಿಗಳು ಕೆರೆಯ ನೀರನ್ನು ನಂಬಿಕೊಂಡು ಬದುಕುತ್ತಿವೆ.
ಬೇಸಿಗೆ ಸಮೀಪಿಸುವಾಗ ಕೆರೆಗಳು ಬತ್ತಿಹೊಗುತ್ತವೆ. ಕಳೆದ ಭಾರಿಯೂ ಸಹ ಕೊಂಡಜ್ಜಿ ಕೆರೆ ಖಾಲಿಯಾದ ಪರಿಣಾಮ ಹಲವಾರು ಪ್ರಾಣಿ ಪಕ್ಷಿಗಳು ನೀರಿಲ್ಲದೆ ಸಾವನಪ್ಪಿದ್ದವು, ಈ ಭಾರಿ ಈ ರೀತಿಯ ಯಾವುದೇ ಅನಾಹುತ ಸಂಭವಿಸದಿರುವಂತೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಆದ್ದರಿಂದ ಬೇಸಿಗೆ ಅವಧಿ ಮುಗಿಯುವ ವರೆಗೆ ಕೊಂಡಜ್ಜಿ ಅರಣ್ಯದ ಆಯ್ದ ಸ್ಥಳಗಳಲ್ಲಿ ನೀರು ಶೇಕರಣಾ ತೊಟ್ಟಿಗಳನ್ನು ಅಳವಡಿಸಿ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಿದರೆ, ಅರಣ್ಯದ ಪ್ರಾಣಿ ಸಂಕುಲಕ್ಕೆ ಅನುಕೂಲವಾಗಲಿದೆ ಎಂದು ಆಗ್ರಹಿಸಿದ್ಧಾರೆ.
ಸಾಧ್ಯವಾದಷ್ಟು ಪ್ರಮಾಣದಲ್ಲಿ ಸಾರ್ವಜನಿಕರ, ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪ್ರಾಣಿ ಸಂಕುಲವನ್ನು ಉಳಿಸುವ ಕಾರ್ಯವನ್ನು ಕೈಗೊಳ್ಳಬೇಕೆಂದು ದಾವಣಗೆರೆ ವಲಯ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ವಲಯ ಅರಣ್ಯಾಧಿಕಾರಿ ಸುರೇಶ್ ಅವರು ತಿಳಿಸಿದ್ದಾರೆ .