ತುಮಕೂರು: ಆಹಾರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಉಮೇಶ್ ಕತ್ತಿ ಸಿಎಂ ಸ್ಥಾನದ ಬಗ್ಗೆ ಆಸೆ ವ್ಯಕ್ತಪಡಿಸಿದ್ದಾರೆ.
ಸಿದ್ದಗಂಗಾ ಮಠಕ್ಕೆ ಇಂದು ಭೇಟಿ ನೀಡಿದ್ದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಸಿಎಂ ಆಗೋ ಆಸೆ ಇದೆ. ಯತ್ನಾಳ್ ಸೀನಿಯರ್ ಇದಾರೆ, ನಾನು ಸೀನಿಯರ್ ಇದ್ದಿನಿ. ಸಿಎಂ ಸ್ಥಾನಕ್ಕಾಗಿ ನನಗೂ ಮತ್ತು ಯತ್ನಾಳ್ಗೆ ಪೈಪೋಟಿ ನಡೆಯಲಿದೆ ಎಂದರು.
ಈಗ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾರೆ. ಆ ಪೋಸ್ಟ್ ಸದ್ಯಕ್ಕೆ ಖಾಲಿ ಇಲ್ಲ. ಬಿಜೆಪಿಯಲ್ಲಿ 75 ವರ್ಷದ ವರೆಗೂ ಸಿಎಂ ಆಗೋಕೆ ಅವಕಅಶವಿದೆ. ಸಿಎಂ ಆಗೋ ಆಸೆ ಎಲ್ಲರಿಗೂ ಇರುತ್ತೆ.
ಹಾಗೆ ನನಗೂ ಇದೆ. ಯತ್ನಾಳ್ ಮತ್ತು ನನಗೆ ಇನ್ನೂ 60 ವರ್ಷ. ನನಗೆ ಶ್ರೀಗಳ ಆಶೀರ್ವಾದವಿದೆ. ಮುಂದಿನದಿನಗಳಲ್ಲಿ ಯಾವ ಸ್ಥಾನ ಸಿಕ್ಕರೂ ನಿಭಾಯಿಸುತ್ತೇನೆ ಎಂದು ಉಮೇಶ್ ಕತ್ತಿ ಹೇಳಿದರು.
ಸಿಎಂ ಯಡಿಯೂರಪ್ಪ ಅವರು ನನಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜವಾಬ್ದಾರಿ ಕೊಟ್ಟಿದ್ದಾರೆ. ರಾಜ್ಯಕ್ಕೆ ಹೆಸರು ತರುವ ನಿಟ್ಟಿನಲ್ಲಿ ಕೆಲಸ ಮಾಡಿವೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗೂ ಈಗಲೂ ಇದೆ. ಪ್ರತ್ಯೇಕ ರಾಜ್ಯದ ಕೂಗು ಮುಂದಕ್ಕೂ ಇರಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.



