ವಿಜಯಪುರ: ಜನವರಿ 16ರಂದು ಅಮಿತ್ ಶಾ ವಿಜಯಪುರ ಜಿಲ್ಲೆಗೆ ಬರುತ್ತಿದ್ದು, ಸಂಕ್ರಮಣಕ್ಕೆ ಸಚಿವ ಸಂಪುಟ ವಿಸ್ತರಣೆಯಾಗುತ್ತೋ ಗೊತ್ತಿಲ್ಲ. ಆದರೆ, ಮತ್ತೇನಾದರೂ ಆಗಬಹುದು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಯತ್ನಾಳ್ ಜ.16ರಂದು ಅಮಿತ್ ಶಾ ವಿಜಯಪುರ ಜಿಲ್ಲೆಗೆ ಬರ್ತಿದ್ದಾರೆ. ಸಂಕ್ರಮಣಕ್ಕೆ ಸಚಿವ ಸಂಪುಟ ವಿಸ್ತರಣೆ ಆಗುತ್ತೋ ಬದಲಾವಣೆ ಆಗುತ್ತೋ ಗೊತ್ತಿಲ್ಲ. ಸಂಪುಟ ವಿಸ್ತರಣೆಗಿಂತಲೂ ಮತ್ತೇನಾದರೂ ಆಗಬಹುದು. ಉತ್ತರ ಕರ್ನಾಟಕ, ವಿಜಯಪುರ ಜಿಲ್ಲೆಗೆ ಒಳಿತಾಗಲಿದೆ ಎನ್ನುವ ಮೂಲಕ ಸಿಎಂ ಸ್ಥಾನದ ಮೇಲಿನ ಆಸೆಯನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ.
ಸಚಿವ ಸ್ಥಾನದ ಬಗ್ಗೆ ಕೇಳಿದಾಗ, ಇದೆಲ್ಲಾ ಮಾಧ್ಯಮದವರ ಸೃಷ್ಟಿ. ಮಾಧ್ಯಮದವರು ಯಾವಾಗ ಯಾವಾಗ ಯಾರ ಪರವಾಗಿ ಇರ್ತರೋ ಗೊತ್ತಿಲ್ಲ. ದಯವಿಟ್ಟು ನನ್ನ ಹೆಸರು ಸಚಿವ ಸಂಪುಟಕ್ಕೆ ಸೇರಲಿದೆ ಎಂದು ಸುದ್ದಿ ಮಾಡಬೇಡಿ. ನನಗೆ ಸಚಿವನಾಗಲು ಇಷ್ಟವಿಲ್ಲ. ಯಾರ ಹಣೆ ಬರಹದಲ್ಲಿ ಏನಿದೆ ಎಂಬುದು ಗೊತ್ತಿಲ್ಲ ಎಂದು ಮಾರ್ಮಿಕವಾಗಿ ಯತ್ನಾಳ್ ನುಡಿದರು.
ಸಂಕ್ರಮಣದ ಉತ್ತರಾಯಣದಿಂದ ಕೇಂದ್ರದ ಹೈಕಮಾಂಡ್ ಒಳ್ಳೆಯ ನಿರ್ಣಯ ತೆಗೆದುಕೊಳ್ಳಲಿದ್ದಾರೆ. ವಿಜಯಪುರ ಜಿಲ್ಲೆಗೆ ಇಷ್ಟು ದಿನ ಆದ ಅನ್ಯಾಯ ಸರಿ ಪಡಿಸಲಿದ್ದಾರೆ. ಅಮಿತ್ ಶಾ ಅವರು ಜನವರಿ 16 ರಂದು ವಿಜಯಪುರ ಜಿಲ್ಲೆಗೆ ಆಗಮಿಸಲಿದ್ದಾರೆ. ಅವರು ಬರುವ ಮುನ್ನವೇ ಭಾರಿ ಬದಲಾವಣೆ ಆಗಲಿದೆ ಎಂದು ತಿಳಿಸಿದರು.
ಇನ್ನು ಕಾರ್ಯಕ್ರಮದ ಬ್ಯಾನರ್ನಲ್ಲಿ ಸಿಎಂ ಭಾವಚಿತ್ರ ಹಾಕಿಲ್ಲ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಯತ್ನಾಳ್, ಇದು ಕೇಂದ್ರ ಸರ್ಕಾರದ ಕಾರ್ಯಕ್ರಮ. ಕೇಂದ್ರ ನಾಯಕರ ಭಾವಚಿತ್ರಗಳನ್ನು ಬ್ಯಾನರ್ನಲ್ಲಿ ಹಾಕಲಾಗಿದೆ. ಸಿಎಂ ಯಡಿಯೂರಪ್ಪನವರು ನಮ್ಮ ಹೃದಯದಲ್ಲಿ, ಮನದಲ್ಲಿದ್ದಾರೆ ಎಂದು ಸಮಜಾಯಿಷಿ ನೀಡಿದ್ದಾರೆ.



