ನವದೆಹಲಿ: 12 ನೇ ಶತಮಾನದಲ್ಲಿ ಬಸವಣ್ಣ ಅನುಭವ ಮಂಟಪದ ಮೂಲಕ ಜಗತ್ತಿಗೆ ಮೊದಲ ಪ್ರಜಾಪ್ರಭುತ್ವ ಮಹತ್ವವನ್ನು ತಿಳಿಸಿದ್ದರು ಎಂದ ಪ್ರಧಾನಿ ನರೇಂದ್ರ ಮೋದಿ ಅವರು, ಕನ್ನಡದಲ್ಲಿಯೇ ಅನುಭವ ಮಂಟಪದ ಮಹತ್ವ ಸಾರುವ ಮೂಲಕ ಕನ್ನಡಿಗರ ಗಮನಸೆಳೆದರು.
971 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವಂತ ನೂತನ ಸಂಸತ್ ಭವನದ ಶಂಕುಸ್ತಾಪನೆ ನೆರವೇರಿಸಿ ಮಾತನಾರಿದ ಪ್ರಧಾನಿ, ಬಸವಣ್ಣ ಅನುಭವ ಮಂಟಪ ಮೂಲಕ ಇಡೀ ವಿಶ್ವದಲ್ಲಿಯೇ ಬಸವಣ್ಣ ಅವರು 12 ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವ ಬಗ್ಗೆ ಅರಿವು ಮೂಡಿಸಿದ್ದರು. ಈ ಅನುಭವ ಮಂಟಪದಲ್ಲಿ ನಾಡಿನ, ರಾಷ್ಟ್ರದ ಉನ್ನತಿಗೆ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಅದು ಇಡೀ ಜಗತ್ತಿಗೆ ಮಾದರಿಯಾದುದು. ಭಾರತ ಪ್ರಜಾಪ್ರಭುತ್ವದ ತಾಯಿ. ಭಾರತದಲ್ಲಿ ಪ್ರಜಾಪ್ರಭುತ್ವ ಎನ್ನುವುದು ಒಂದು ಸಂಸ್ಕೃತಿ, ಜೀವನ ಮೌಲ್ಯ, ಜೀವನ ಪಥ ಮತ್ತು ದೇಶ ಜೀವಾಳ ಅದು. ಶತಮಾನಗಳ ಅನುಭವದ ಆಧಾರದ ಮೇಲೆ ಅಭಿವೃದ್ಧಿ ಪಡಿಸಿದ ವ್ಯವಸ್ಥೆ ನಮ್ಮ ಈ ಪ್ರಜಾಪ್ರಭುತ್ವ ಎಂದು ಪ್ರಧಾನಿ ವಿವರಿಸಿದರು.

ಒಬ್ಬ ಸಂಸದನಾಗಿ 2014ರಲ್ಲಿ ಮೊಟ್ಟ ಮೊದಲ ಬಾರಿ ಸಂಸತ್ ಭವನ ಪ್ರವೇಶಿಸಿದ ಆ ಸಂದರ್ಭ ನನ್ನ ಬದುಕಿನ ಅವಿಸ್ಮರಣೀಯವಾದುದು. ಪ್ರಜಾಪ್ರಭುತ್ವದ ದೇಗುಲವನ್ನು ಪ್ರವೇಶಿಸುವ ಮೊದಲು ನಾನು ತಲೆಬಾಗಿ ನಮಸ್ಕರಿಸಿದ್ದೇನೆ, ಗೌರವ ಸಲ್ಲಿಸದ್ದೇನೆ. ಈ ದಿನ 130 ಕೋಟಿಗೂ ಅಧಿಕ ಭಾರತೀಯರಿಗೆ ಹೆಮ್ಮೆಯ ದಿನವಾಗಿದ್ದು, ನಾವೆಲ್ಲರೂ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದೇವೆ.
ಹೊಸ ಸಂಸತ್ ಭವನದ ಆವರಣವು ಹಳೆಯ ಮತ್ತು ಹೊಸ ಕಟ್ಟಡಗಳನ್ನು ಒಳಗೊಂಡಿರಲಿದೆ. ಹಳೆಯ ಸಂಸತ್ ಭವನ ದೇಶದ ಕಾಲಕಾಲದ ಅಗತ್ಯಗಳನ್ನು ಪೂರೈಸುವುದಕ್ಕೆ ಬಳಕೆಯಾಗಲಿದ್ದು, ಹೊಸ ಸಂಸತ್ ಭವನದಲ್ಲಿ ದೇಶವನ್ನು ಭವಿಷ್ಯದತ್ತ ಕೊಂಡೊಯ್ಯುವ ಚಾಲನಾ ಶಕ್ತಿ ಒದಗಿಸಲಿದೆ. ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಸಾಕ್ಷಿಯಾಗಲಿದೆ.
ಇಪ್ಪತ್ತೊಂದನೇ ಶತಮಾನ ಭಾರತಕ್ಕೆ ಸೇರಿದ್ದು. ಭಾರತಕ್ಕೆ ಬಂದೊದಗುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ನಮ್ಮೆಲ್ಲರಿಗೂ ದೇಶ ಮೊದಲು. ಆ ಭಾವದೊಂದಿಗೆ ಕೆಲಸ ಮಾಡೋಣ. ಆತ್ಮನಿರ್ಭರ ಭಾರತವನ್ನು ಕಟ್ಟಿ ಜಗತ್ತಿಗೆ ಮಾದರಿಯಾಗೋಣ ಎಂದರು.



