ಬೆಳಗಾವಿ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನ ಕುರಿತು ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ಮೂರ್ಖತನದ್ದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು. ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ಆ ವಿಡಿಯೋ ಕಾರಣ: ಡಿಕೆಶಿ ಹೇಳಿಕೆ
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ರೀತಿ ಹೇಳಿಕೆ ಕೊಡಲು ಡಿ.ಕೆ.ಶಿವಕುಮಾರ್ ಗೆ ನಾಚಿಕೆ ಆಗಬೇಕು. ಆ ವಿಡಿಯೋ ಲೀಕ್ ಆಗಿದೆ ಅಂದರೆ ಈ ವಿಡಿಯೋ ಡಿಕೆಶಿ ಹತ್ತಿರ ಇರಬೇಕು. ವಿಡಿಯೋ ಇದೆ ಅಂತಾ ಹೇಳಿ ರಾಜ್ಯದ ಜನರ ದಿಕ್ಕು ತಪ್ಪಿಸುವದು ಸರಿಯಲ್ಲ. ವಿಡಿಯೋ ಕಾಪಿ ನಿಮ್ಮಲ್ಲಿದ್ದರೆ ಬಿಡುಗಡೆ ಮಾಡಲಿ ಎಂದು ಈಶ್ವರಪ್ಪ ಸವಾಲು ಹಾಕಿದರು.
ಕಾಂಗ್ರೆಸ್ ಈಗಾಗಲೇ ನೆಲ ಕಚ್ಚಿ ಹೋಗಿದ್ದು, ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಎಂಎಲ್ಎ ಯಾರು, ಎಂಎಲ್ಸಿ ಯಾರು, ಮಂತ್ರಿ ಯಾರು ಅಂತಾ ಹೇಳಲಿ. ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ ನೀಡುವದು ಖಂಡಿಸುತ್ತೇನೆ ಎಂದರು.



