ಡಿವಿಜಿ ಸುದ್ದಿ, ದಾವಣಗೆರೆ: ಆಸ್ತಿ ವಿವಾದ ಹಾಗೂ ಕೊರೊನಾ ವೈರಸ್ ಹಿನ್ನೆಲೆ ಕಳೆದ ಆರು ತಿಂಗಳಿಂದ ಬೀಗ ಹಾಕಲಾಗಿದ್ದ ನಗರದ ಬೀರಲಿಂಗೇಶ್ವರ ದೇವಸ್ಥಾನ ಬಾಗಿಲು ತೆರೆಯಲು ಬಂದ ಜಿಲ್ಲಾಡಳಿತ ವಿರುದ್ಧ ದೇವಸ್ಥಾನ ಹಳೇ ಅರ್ಚಕ ಕುಟುಂಬ ತೀವ್ರ ವಿರೋಧ ವ್ಯಕ್ತಪಡಿಸಿತು. ಈ ವೇಳೆ ಪೊಲೀಸರ ಭದ್ರತೆ ನಡುವೆ ದೇವಸ್ಥಾನ ಬಾಗಿಲು ತೆರೆದು, ವಿರೋಧ ವ್ಯಕ್ತಪಡಿದ ಹಳೇ ಅರ್ಚಕ ಮತ್ತು ಕುಟುಂಬದವರನ್ನು ಬಂಧಿಸಲಾಯಿತು.
ನಗರದ ಪಿಬಿ ರಸ್ತೆಯಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ಈ ಹಿಂದೆ ಅರ್ಚಕರಾಗಿದ್ದ ಬಿ.ಜಿ. ಲಿಂಗೇಶ್ ವಿರುದ್ಧ ಕೆಲ ದೂರುಗಳು ಬಂದ ಹಿನ್ನೆಲೆ ಜಿಲ್ಲಾಧಿಕಾರಿಗಳು ಅರ್ಚಕರನ್ನು ವಜಾಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಹಳೇ ಅರ್ಚಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೇ ವೇಳೆ ಕೊರೊನಾ ಬಂದಿದ್ದರರಿಂ ಕಳೆದ 6 ತಿಂಗಳಿಂದ ದೇವಸ್ಥಾನ ಮುಚ್ಚಲಾಗಿತ್ತು. ಇಂದು ಕಂದಾಯ ನಿರೀಕ್ಷಕರು ಮುಜುರಾಯಿ ಇಲಾಖೆ ನೇಮಿಸಿದ್ದ ಹೊಸ ಅರ್ಚಕರೊಂದಿಗೆ ಬಾಗಿಲು ತೆರೆಯಲು ಬಂದಾಗ ಹಳೇಯ ಅರ್ಚಕ ಲಿಂಗೇಶ್ ಕುಟುಂಬ ಸಮೇತ ಆಗಮಿಸಿ, ಈ ಪ್ರಕರಣ ಹೈ ಕೋರ್ಟ್ ನಲ್ಲಿದೆ. ಬೀಗ ತೆರೆಯಲು ನಾವು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರಿಂದ ದೇವಸ್ಥಾನ ಆವರಣದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಪೊಲೀಸರು ಮತ್ತು ಹಳೇ ಅರ್ಚಕ ಕುಟುಂಬದ ಮಧ್ಯೆ ಗಲಾಟೆ ತೀವ್ರಗೊಂಡ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಬೀಗ ತೆರೆಯಲು ಮುಂದಾದರು. ಆಗ ಅರ್ಚಕ ಲಿಂಗೇಶ್ ಮತ್ತು ಅವರ ಕುಟುಂಬ ವರ್ಗದವರು, ಪ್ರಕರಣ ಕೋರ್ಟ್ ನಲ್ಲಿದ್ದು ದೇವಸ್ಥಾನ ಬಾಗಿಲು ತೆರೆಯಲು ನಾವು ಬಿಡುವುದಿಲ್ಲ ಎಂದು ಪ್ರತಿರೋಧ ವ್ಯಕ್ತಪಡಿಸಿದರು. ಪ್ರಕರಣವನ್ನು ಕೋರ್ಟ್ ನಲ್ಲಿ ಎದುರಿಸಿಕೊಳ್ಳಿ, ಈಗ ದೇವಸ್ಥಾನ ಬಾಗಿಲು ತೆರೆಯಲು ಅವಕಾಶ ನೀಡಿ ಎಂದು ಎಷ್ಟೇ ಮನವೊಲಿಸಿದರೂ ಹಳೇ ಅರ್ಚಕ ಕುಟುಂಬದವರು ಜಗ್ಗಲಿಲ್ಲ.
ಈ ಹಿನ್ನೆಲೆಯಲ್ಲಿ ಪೊಲೀಸರು ಹಳೇ ಅರ್ಚಕ ಲಿಂಗೇಶ್ ಸೇರಿದಂತೆ ಕುಟುಂಬದ 15ಕ್ಕೂ ಹೆಚ್ಚು ಜನರನ್ನು ಬಂಧಿಸಿ ದೇವಸ್ಥಾನ ಬಾಗಿಲು ತೆರೆದು ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಟ್ಟರು. ಈ ವೇಳೆ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಹಾಗೂ ಭಕ್ತರ ಸಮ್ಮುಖದಲ್ಲಿ ಹೊಸ ಅರ್ಚಕರು ಪೂಜೆ ಸಲ್ಲಿಸಿದರು.



