ಡಿವಿಜಿ ಸುದ್ದಿ, ದಾವಣಗೆರೆ: ಮಹಾನಗರ ಪಾಲಿಕೆಯ ವಿಪಕ್ಷನಾಯಕ ಎ. ನಾಗರಾಜ್ ನೇತೃತ್ವದಲ್ಲಿ ಪಾಲಿಕೆ ಕಾಂಗ್ರೆಸ್ ಸದಸ್ಯರುಗಳು ಸಿಜಿ ಆಸ್ಪತ್ರೆಯ ಕೋವಿಡ್ ಕೇಂದ್ರಗಳಿಗೆ ಭೇಟಿ ನೀಡಿ, ಕೋವಿಡ್ ನಿರ್ವಹಣೆ ಬಗ್ಗೆ ಪರಿಶೀಲಿಸಿದರು.
ವಿಪಕ್ಷ ಸದಸ್ಯರ ನಿಯೋಗ ಎಲ್ಲಾ ವಾರ್ಡ್ ಗಳನ್ನು ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿಯ ಕೊರತೆ ಎದ್ದುಕಾಣುತ್ತಿದೆ . ಜಿಲ್ಲಾಡಳಿತ ಶೀಘ್ರವೇ ಇದರ ಬಗ್ಗೆ ಗಮನ ಹರಿಸಿ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ಸರಿಪಡಿಸಬೇಕು, ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುವಾಗದಾಗಿ ತಿಳಿಸಿದರು.
ನಂತರ ಜಿಲ್ಲಾ ಸರ್ಜನ್ ಡಾ. ನಾಗರಾಜ್ ಅವರಿಂದ ಕೋವಿಡ್ ನಿರ್ವಹಣೆಯ ಬಗ್ಗೆ ಮಾಹಿತಿ ಪಡೆದರು. ವೆಂಟಿಲೇಟರ್ ತೊಂದರೆಯಿಂದ ಪ್ರತಿದಿನ ರೋಗಿಗಳು ಪರದಾಡುವಂತಹ ಪರಿಸ್ಥಿತಿ ಇದ್ದು, ಇದರ ಬಗ್ಗೆ ಯಾವ ಕ್ರಮ ತೆಗೆದುಕೊಂಡಿದ್ದೀರೆಂದು ಎ. ನಾಗರಾಜ್ ವೈದ್ಯರುಗಳನ್ನು ಪ್ರಶ್ನಿಸಿದರು.
ಮಾಹಿತಿ ನೀಡಿದ ಡಾ. ನಾಗರಾಜ್, ನಮ್ಮಲ್ಲಿ 14 ವೆಂಟಿಲೇಟರ್ ಇದ್ದು ಅದರಲ್ಲಿ 10 ವೆಂಟಿಲೇಟರ್ ಗಳು ಕಾರ್ಯನಿರ್ವಹಿಸುತ್ತಿವೆ. ಇತ್ತೀಚೆಗೆ ಪಿ.ಎಂ. ಕೇರ್ ನಿಂದ 25 ವೆಂಟಿಲೇಟರ್ ಗಳು ಬಂದಿದ್ದು, ಅದನ್ನು ನಿರ್ವಹಿಸಲು ವೈದ್ಯರ ಮತ್ತು ಸಿಬ್ಬಂದಿಯ ಇಲ್ಲದ ಕಾರಣ ಕಾರ್ಯನಿರ್ವಹಿಸುತ್ತಿಲ್ಲ. ಸಿಬ್ಬಂದಿ ನೇಮಕಾತಿ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು, ಸಿಬ್ಬಂದಿ ನೀಡಿದ ತಕ್ಷಣ ವೆಂಟಿಲೇಟರ್ ಕಾರ್ಯನಿರ್ವಹಣೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಸರ್ಜನ್ ಡಾ. ಶಶಿಧರ್ ಮಾತನಾಡಿ, ರೋಗಿಗಳಿಗೆ ಮಧ್ಯಾಹ್ನ ಮತ್ತು ರಾತ್ರಿ ಚಪಾತಿ ಪಲ್ಯ ಅನ್ನ ಸಾಂಬಾರ್ ನೀಡಲಾಗುವುದು. ಸಂಜೆ ಹಾಲು ಮತ್ತು ಡ್ರೈಫ್ರೂಟ್ಸ್ ನೀಡಲಾಗುತ್ತದೆ . ರೋಗಿಗಳಿಗೆ ಊಟದ ರುಚಿ ತಿಳಿಯದ ಕಾರಣ ಊಟ ಸರಿ ಇಲ್ಲ ಎಂದು ಹೇಳುತ್ತಾರೆ. ಸ್ವತಃ ಎಸ್ಪಿ ಅವರು ಸಹ ಊಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಪಾಲಿಕೆ ಸದಸ್ಯ ಸೈಯದ್ ಚಾರ್ಲಿ ಮಾತನಾಡಿ, ಕೋವಿಡ್ ಪಾಸಿಟಿವ್ ರೋಗಿಗಳನ್ನು ಹೋಂ ಕ್ವಾರಂಟೈನ್ ಕಳಿಸಿದರೆ, ಅವರು ಎಲ್ಲಾ ಕಡೆ ಸುತ್ತಾಡುತ್ತಿದ್ದು, ಅವರಿಗೆ ಸೀಲ್ ಹಾಕಿ ಕಳಿಸುವ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಡಾ. ಸಂಜಯ್ ಮಾತನಾಡಿ, ವೆಂಲೇಟರ್ ಗೆ ಪ್ರತಿದಿನ 650 ಸಿಲಿಂಡರ್ ಅವಶ್ಯಕತೆಯಿದ್ದು, ಈಗ 300 ಸಿಲೆಂಡರ್ ಮಾತ್ರ ದೊರೆಯುತ್ತಿದೆ. ಹೀಗಾಗಿ ನಿರ್ವಹಣೆ ತೊಂದರೆಯಾಗುತ್ತಿದೆ. ಸದ್ಯ ಜಂಬೋ ಸಿಲೆಂಡರ್ ಮೂಲಕ ಆಕ್ಸಿಜನ್ ಸಪ್ಲೈ ಮಾಡುತ್ತಿದ್ದು , ಎಸ್.ಎಸ್ ಹೈಟೆಕ್ ಹಾಗೂ ಬಾಪೂಜಿ ಹಾಸ್ಪಿಟಲ್ ನಲ್ಲಿ ಇರುವಂತೆ ಲಿಕ್ವಿಡ್ ಟ್ಯಾಂಕ್ ಮೂಲಕ ಆಕ್ಸಿಜನ್ ಸಪ್ಲೇ ಮಾಡಿದರೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸದಸ್ಯರುಗಳಾದ ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್, ಸಿಡಿ ಪ್ರಕಾಶ್ ವಿನಾಯಕ ಪೈಲ್ವಾನ್ ಆಶಾ ಉಮೇಶ್, ಸಾಮಾಜಿಕ ಜಾಲತಾಣದ ಕೆ.ಎಲ್. ಹರೀಶ್ ಬಸಾಪುರ, ಯುವರಾಜ್ ಮುಂತಾದವರು ಉಪಸ್ಥಿತರಿದ್ದರು.



