ಡಿವಿಜಿ ಸುದ್ದಿ, ಮೈಸೂರು: ಶಾಸಕ ಜಮೀರ್ ಖಾನ್ ಗಲಭೆ ಮಾಡಿದವರ ಮನೆಗೆ ತೆರಳಿ ಸಾಂತ್ವನ ಹೇಳುತ್ತಿದ್ಧಾರೆ. ಆದರೆ, ಬೆಂಕಿಯಿಂದ ಮನೆ ಕಳೆದುಕೊಂಡ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಯಾರೂ ಹೋಗುತ್ತಿಲ್ಲ. ಕಾಂಗ್ರೆಸ್ ಮಾಡಿದ ಪಾಪದ ಫಲದಿಂದಲೇ ಶಾಸಕರ ಮನೆ ಸುಟ್ಟು ಹೋಗಲು ಕಾರಣ ಎಂದು ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಹೇಳಿದರು.
ಬೆಂಗಳೂರಿನ ಡಿ.ಜೆ ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ರಮೇಶ್ ಕುಮಾರ್ ಅವರಂತಹ ಕಾಂಗ್ರೆಸ್ ಮುಖಂಡರು ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ಮಾಡಿದ ಭಾಷಣದ ಬೆಂಕಿ ಈಗ ಹೊತ್ತಿ ಉರಿಯುತ್ತಿದೆ ಎಂದರಯ
ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರು ಮಾಡಿದ ಭಾಷಣ, ಪ್ರಚೋದನೆ ಕಿಡಿಯೇ ಈ ಬೆಂಕಿ. ಈಗ ಈ ಬೆಂಕಿ ಕೆಂಡವಾಗಿದೆ. ಅದನ್ನು ಆರಿಸುವ ಗೋಜಿಗೆ ಯಾರೂ ಹೋಗಿಲ್ಲ. ಆ ಕೆಂಡವನ್ನು ಹಿಡಿದು ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.



