ಡಿವಿಜಿ ಸುದ್ದಿ, ಸಿರಿಗೆರೆ: ಬ್ಯಾಂಕಿಂಗ್ ಪರೀಕ್ಷೆ ತರಬೇತಿಗೆ ಆಂಧ್ರಪ್ರದೇಶಕ್ಕೆ ಹೋಗಿ ಸಿಲುಕಿದ ರಾಜ್ಯದ ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಳಬಾಳು ಜಗದ್ಗುರು ಡಾ. ಶ್ರೀ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಭರವಸೆಯ ಬೆಳಕಾಗಿದ್ದಾರೆ.
ಶ್ರೀಗಳ ನಿಕಟ ಸಂಪರ್ಕದಲ್ಲಿದ್ದ ರಾಚಪ್ಪ ಹೇರೂರು ಅವರ ಪುತ್ರ ಆಂಧ್ರಪ್ರದೇಶದ ಹೈಕೋರ್ಟ್ ನ್ಯಾಯವಾದಿ ವಿಜಯ್ ಕುಮಾರ್ ಹೇರೂರ್ ಅವರ ಮೂಲಕ ವಿದ್ಯಾರ್ಥಿ ಸಮುದಾಯಕ್ಕೆ ಶ್ರೀಜಗದ್ಗುರುಗಳು ನೆರವು ಕಲ್ಪಿಸಿದ್ದಾರೆ.

ವಿಜಯ್ ಕುಮಾರ್ ಹೇರೂರು ನಂದ್ಯಾಲ ಮತ್ತು ಕರ್ನೂಲ್ ಜಿಲ್ಲೆಯಲ್ಲಿನ ಕೆಲವರೊಂದಿಗೆ ಸಂಪರ್ಕ ಸಾಧಿಸಿ ಸಂಕಷ್ಟಕ್ಕೆ ಈಡಾಗಿರುವ ವಿದ್ಯಾರ್ಥಿಗಳಿಗೆ ಊಟೋಪಚಾರದ ವ್ಯವಸ್ಥೆ ಮಾಡುತ್ತಿದ್ದಾರೆ. ನಿತ್ಯವೂ ಅಡುಗೆ ತಯಾರಿಸಿ ನಂದ್ಯಾಲ ರಾಮಾಯ ದೇವಸ್ಥಾನಕ್ಕೆ ತರಲಾಗುತ್ತದೆ. ವಿದ್ಯಾರ್ಥಿಗಳು ಅಲ್ಲಿಗೆ ಬಂದು ಊಟ ಮಾಡಬಹುದು, ಇಲ್ಲವೇ ಪಾರ್ಸಲ್ ತೆಗೆದುಕೊಂಡು ಹೋಗಬಹುದು. ಬೇರೆ ರಾಜ್ಯದ ವಿದ್ಯಾರ್ಥಿಗಳು ಸೇರಿ ಸುಮಾರು ಇನ್ನೂರು ಜನರಿಗೆ ಈಗ ಊಟೋಪಚಾರ ವ್ಯವಸ್ಥೆ ಲಭ್ಯವಾಗುತ್ತಿದೆ. ಲಾಕ್ ಡೌನ್ ಮುಗಿಯುವವರೆಗೂ ಇದು ಮುಂದುವರಿಯಲಿದೆ ಎಂದು ಶ್ರೀಗಳು ತಿಳಿಸಿದ್ದಾರೆ.
ನಂದ್ಯಾಲ ಸಂಸದರಾದ, ಶ್ರೀ ಬ್ರಹ್ಮಾನಂದ ರೆಡ್ಡಿ ಶಾಸಕರಾದ, ಶಿಲ್ಪಾ ರವಿಚಂದ್ರನ್ ರೆಡ್ಡಿ ಹಾಗೂ ಸ್ಥಳೀಯ ಸಂಘಟನೆಯವರು ಸಹ ಅನ್ನದಾನ ಕಾರ್ಯಕ್ರಮದಲ್ಲಿ ಕೈಜೋಡಿಸಿದ್ದಾರೆ. ಶ್ರೀಗಳ ನೆರವಿಗೆ ವಿದ್ಯಾರ್ಥಿಗಳು ಧನ್ಯವಾದ ತಿಳಿಸಿದ್ದಾರೆ.



