Connect with us

Dvgsuddi Kannada | online news portal | Kannada news online

ಅಂಗವೈಕಲ್ಯವನ್ನೇ ಸವಾಲಾಗಿ ಸ್ವೀಕರಿಸಿ: ಡಾ.ಸುರೇಶ್

Home

ಅಂಗವೈಕಲ್ಯವನ್ನೇ ಸವಾಲಾಗಿ ಸ್ವೀಕರಿಸಿ: ಡಾ.ಸುರೇಶ್

ಡಿವಿಜಿ ಸುದ್ದಿ, ದಾವಣಗೆರೆ:  ಅಂಗವೈಕಲ್ಯತೆಯನ್ನು ಸವಾಲಾಗಿ ಸ್ವೀಕರಿಸಿ ವಿಕಲಚೇತನರು ಸಾಧನೆ ಮಾಡಬೇಕು. ಕರುಣೆಯ ಬದಲು ಸಾಧನೆಗೆ ಪೂರಕವಾದ ವಾತಾವರಣ ನೀಡಿದರೆ ಅಂಗವಿಕಲರು ಉತ್ತಮ ಸಾಧನೆ ಮಾಡುತ್ತಾರೆ ಎಂದು ರಾಜ್ಯ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಸಲಹಾ ಸಮಿತಿ ಸದಸ್ಯ ಡಾ. ಸುರೇಶ್ ಹನಗವಾಡಿ ಹೇಳಿದರು.

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ  ವಿಕಲಚೇತನರ ದಿನಾಚರಣೆ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ  ವಿಕಲಚೇತನರ ಕ್ರೀಡಾ ಕೂಟ ಸ್ಪರ್ಧೆಗೆ ಚಾಲನೆ  ಮಾತನಾಡಿದರು.

ಅಂಗವಿಕಲರಿಗೆ ಕರುಣೆಯ ಬದಲು ಸಾಧನೆಗೆ ಪೂರಕವಾದ ವಾತವರಣ ನೀಡಿದರೆ ಅವರು ಸಹ ಉತ್ತಮ ಸಾಧನೆ ಮಾಡುತ್ತಾರೆ. ವಿಕಲಚೇತನರಿಗೆ ಇರುವ ಸಮಸ್ಯೆ ಮತ್ತು ಸಮಾಜದಲ್ಲಿನ ಅವರ ಸ್ಥಾನಮಾನಗಳ ಕುರಿತು ಅರಿವು ಮೂಡಿಸಿ ಅವರನ್ನು ಸಮಾಜಮುಖಿಗಳನ್ನಾಗಿ ಮಾಡುವ ಕೆಲಸ ಈ ದಿನಾಚರಣೆಯಿಂದ ಆಗಬೇಕು ಎಂದರು.

ವಿಕಲಚೇತನರು ಎಲ್ಲರಂತೆ ಸಮಾನರು. ಅವರಿಗೂ ಎಲ್ಲ ರೀತಿಯ ಹಕ್ಕುಗಳಿವೆ. ಪ್ರತಿ ವರ್ಷವೂ ಒಂದು ಥೀಮ್‍ನ ಮೂಲಕ ವಿಕಲಚೇತನರ ದಿನವನ್ನು ಆಚರಿಸಲಾಗುತ್ತದೆ. ಸಾಧನೆಗೆ ಅಂಗವೈಕಲ್ಯ ಎಂದೂ ಅಡ್ಡಿಯಾಗುವುದಿಲ್ಲ. ಎಲ್ಲರಂತೆ ವಿಕಲಚೇತನರು ಸಾಧನೆ ಮಾಡಬಹುದು ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಹೆಚ್. ವಿಜಯ್‍ಕುಮಾರ್ ಮಾತನಾಡಿ, ವಿಕಲಚೇತರು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದು ಇದನ್ನು ಸರ್ಕಾರ ಮತ್ತು ಸಂಬಂಧ ಪಟ್ಟ ಇಲಾಖೆಯವರು ಗುರುತಿಸುವ ಕಾರ್ಯವಾಗಬೇಕು. ಇತರರಿಗೆ ಹೊರೆಯಾಗಿ ಬದುಕುವ ಬದಲು ಸರ್ಕಾರ ನೀಡುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸ್ವ ಉದ್ಯೋಗ ಮಾಡಿ ವಿಕಲಚೇತನರು ಸ್ವಾವಲಂಬಿಗಳಾಗಿ ಬದುಕಬೇಕು. ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿನ ಕ್ರೀಡಾಪಟುಗಳು ತಮ್ಮ ಸಾಧನೆಯನ್ನು ಮಾಡಿದ್ದಾರೆ. ಇಂತಹ ವಿಕಲಚೇತನರು ನಮಗೆ ಪ್ರೇರಣೆಯಾಗಬೇಕು ಎಂದರು.

ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಜಿ.ಎಸ್.ಶಶಿಧರ ಮಾತನಾಡಿ, ಡಿ.03 ರಂದು ವಿಕಲಚೇತರ ದಿನವನ್ನು ಆಚರಿಸಲಾಗುತ್ತದೆ. ಈ ದಿನಾಚರಣೆಯ ಅಂಗವಾಗಿ ಇಂದು ವಿಕಲಚೇತನರಿಗಾಗಿ ಹಲವು ಕ್ರೀಡಾ ಕೂಟಗಳನ್ನು ಆಯೋಜಿಸಲಾಗಿದೆ. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ವ್ಯಾಪಕ ಪ್ರಚಾರವನ್ನು ನೀಡಲಾಗಿದೆ. ಕ್ರೀಡೆಗಳಲ್ಲಿ ವಿಜೇತರದಾವರಿಗೆ ಡಿ.03 ರಂದು ಬಹುಮಾನವನ್ನು ವಿತರಿಸಲಾಗುವುದು. ಪ್ರತಿವರ್ಷ ಬಹುಮಾನವಾಗಿ ಟೀ-ಶರ್ಟ್‍ಗಳನ್ನು ನೀಡಲಾಗುತ್ತಿತ್ತು. ಆದರೆ ಈ ವರ್ಷ ವ್ಹೀಲ್‍ಚೇರ್‍ಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಕ್ರೀಡಾಕೂಟದಲ್ಲಿ ದೈಹಿಕ ವಿಕಲಚೇತನರಿಗೆ ಊರುಗೋಲು ಓಟ ಮತ್ತು ಬೈಕ್ ರೇಸ್ (ಕಡಿಮೆ ವೇಗದಲ್ಲಿ), ಕೇರಂ, ವ್ಹೀಲ್‍ಚೇರ್ ಓಟ ಸ್ಪರ್ಧೆಗಳು, ವಾಕ್ ಮತ್ತು ಶ್ರವಣದೋಷವುಳ್ಳವರಿಗೆ ಕ್ರಿಕೆಟ್ (ಪುರುಷರು), ಮ್ಯೂಸಿಕಲ್ ಚೇರ್ (ಮಹಿಳೆಯರು) ಸ್ಪರ್ಧೆಗಳು, ದೃಷ್ಠಿದೋಷವುಳ್ಳವರಿಗೆ ಮಡಿಕೆ ಒಡೆಯುವುದು, ಷಾಟ್‍ಪುಟ್ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ವಿಕಲಚೇತನರ ದಿನಚರಣೆಯಲ್ಲಿ ಬಹುಮಾನ ನೀಡಲಾಗುತ್ತದೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕುಸ್ತಿ ತರಬೇತುದಾರ ಶಿವಾನಂದ, ಯು.ಆರ್.ಡಬ್ಲ್ಯೂನ ನಿರ್ವಾಹಕ ಮಂಜುನಾಥ ಮತ್ತು ಡೆಫ್ ಪೇಡರೇಷನ್ ಸಂಚಾಲಕರು ಭಾಗಿಯಾಗಿದ್ರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in Home

To Top