ಡಿವಿಜಿ ಸುದ್ದಿ, ಬೆಂಗಳೂರು: ಕೈ ತುಂಬಾ ಸಂಬಳ ಸಿಗುವ ಕೇಂದ್ರ ಸರ್ಕಾರದ ಅಂಚೆ ಇಲಾಖೆಯಲ್ಲಿದ್ದರೂ, ಅತೀ ಆಸೆಗೆ ಬಿದ್ದ 4 ಸರ್ಕಾರಿ ನೌಕರರು ವಿದೇಶದಿಂದ ಮಾದಕ ವಸ್ತು ತರಿಸಿ ಮಾರಾಟ ಮಾಡುವ ಜಾಲದಲ್ಲಿ ಸಿಕ್ಕು, ಇದೀಗ ಸಿಸಿಬಿ ಪೊಲೀಸ್ ಅತಿಥಿಗಳಾಗಿದ್ದಾರೆ.
ವಿದೇಶಗಳಿಂದ ಪೋಸ್ಟ್ ಮೂಲಕ ಮಾದಕ ವಸ್ತುಗಳನ್ನ ಆಮದು ಮಾಡಿಕೊಂಡು ಮಾರಾಟ ಮಾಡುತ್ತಿದ್ದರು. ಸುಬ್ಬ, ರಮೇಶ್ ಕುಮಾರ್, ಸೈಯದ್ ಮಾಜಿದ್, ವಿಜಯರಾಜನ್ ಬಂಧಿತ ಅಂಚೆ ಕಚೇರಿಯ ಆರೋಪಿಗಳು.ಬೆಂಗಳೂರಿನ ಜಿಪಿಒ ಕಚೇರಿ ಮತ್ತು ಚಾಮರಾಜಪೇಟೆಯ ಪೋಸ್ಟ್ ಆಫೀಸ್ ನಲ್ಲಿ ವಿದೇಶಗಳಿಂದ ಬರುವ ಪೋಸ್ಟಲ್ ಗಳು ಹಾಗೂ ಪಾರ್ಸೆಲ್ ಗಳನ್ನ ಪರಿಶೀಲಿಸುವ ಹುದ್ದೆಯಲ್ಲಿದ್ದರು. ನೆದರ್ಲೆಂಡ್, ಡೆನ್ಮಾರ್ಕ್, ಯುಎಸ್ ಎ ಗಳಿಂದ ಬರುವ ಆರ್ಡಿನರಿ ಪೋಸ್ಟ್ ಕಾರ್ಡ್ ಗಳು ಹಾಗೂ ಪಾರ್ಸೆಲ್ ಗಳನ್ನ ಪರಿಶೀಲಿಸುತ್ತಿದ್ದರು. ಅವುಗಳಲ್ಲಿ ಮಾದಕವಸ್ತುಗಳು ಇದ್ದರೆ ಡೀಲರ್ ಗಳಿಗೆ ಮಾರಿ ಹಣ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದರು. ಇದಲ್ಲದೆ ಇವರೇ ನಕಲಿ ಅಡ್ರೆಸ್ ನೀಡಿ ಡಾರ್ಕ್ ನೆಟ್ ಮೂಲಕ ಖರೀದಿ ಕೂಡ ಮಾಡುತ್ತಿದ್ದರು.
ಬಂಧಿತರಿಂದ 20 ಲಕ್ಷ ಬೆಲೆಯ ಎಕ್ಸ್ ಟಾಸಿ ಮಾತ್ರೆಗಳು, ಎಂಡಿಎಂ ಎ ಕ್ರಿಸ್ಟೆಲ್ ವಶಪಡಿಸಿಕೊಳ್ಳಲಾಗಿದೆ. ಬಂಧಿತ ವಿಜಯ್ ರಾಜ್ ಈ ಹಿಂದೆ ಸೇನೆಯಲ್ಲಿ ಸಹ ಕೆಲಸ ಮಾಡಿದ್ದಾಗಿ ತಿಳಿದು ಬಂದಿದೆ. ಸರ್ಕಾರಿ ಹುದ್ದೆಯನ್ನು ಮಾದಕ ವಸ್ತುಗಳ ಮಾರಾಟಕ್ಕೆ ಬಳಸಿಕೊಂಡ ಆರೋಪದ ಮೇಲೆ ಎಲ್ಲರನ್ನೂ ಬಂಧಿಸಲಾಗಿದೆ.