ಡಿವಿಜಿ ಸುದ್ದಿ, ಚಿಕ್ಕಬಳ್ಳಾಪುರ: ನನ್ನ ವಿರುದ್ಧ ಎಂಟಿಬಿ ನಾಗರಾಜ್ ನೀಡಿರುವ ದೂರಿಗೆ ನಾನು ಹೆದರುವವನಲ್ಲ. ಎಂಟಿಬಿ ದೂರನ್ನ ನಾನು ಲೆಕ್ಕಕ್ಕೆ ಇಟ್ಟಿಲ್ಲ. ಮತ್ತೆ ಇಂತದಕ್ಕೆಲ್ಲ ಕೇರ್ ಮಾಡಲ್ಲ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ.ಎನ್ ಬಚ್ಚೇಗೌಡ ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ವಿರುದ್ಧ ದೂರು ಕೊಟ್ಟರೆ ಕೊಡಲಿ. ಅದಕ್ಕೆ ಹೆದರಲ್ಲ, ನನ್ನ ಕೆಲಸ ನಾನು ಮಾಡಿಕೊಂಡು ಹೋಗುತ್ತೇನೆ. ಮಾನು ಅನೇಕ ವರ್ಷದಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ರಾಜಕೀಯಕ್ಕೆ ಹೊಸಬನಲ್ಲ. ಇಂತಹ ದೂರು ಲೆಕ್ಕಕ್ಕೆ ಇಟ್ಟಿಲ್ಲ. ಜಟ್ಟಿ ಕೆಳಗೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅನ್ನುವ ತರ ಎಂಟಿಬಿ ನಡೆ ಎಂದು ಟೀಕಿಸಿದರು.
ದೂರು ಕೊಟ್ರೆ ನನಗೇನು ಆಗಬೇಕು? ಬಚ್ಚೇಗೌಡನನ್ನ ಯಾರೂ ಏನು ಮಾಡಕ್ಕೆ ಆಗಲ್ಲ. ಯಾರು ಏನು ಕ್ರಮ ತಗೊಳ್ತಾರೆ ನಾನು ನೋಡ್ತೀನಿ. ಅದೇನು ಕ್ರಮ ತಗೋತಾರೆ? ನನ್ನ ಸದಸ್ಯತ್ವದಿಂದ ಕಿತ್ತಾಕೋಕೆ ಆಗುತ್ತಾ? ಎರಡು ಲಕ್ಷ ಮತಗಳ ಅಂತರದಿಂದ ನನಗೆ ಗೆಲುವು ತಂದುಕೊಟ್ಟಿದ್ದಾರೆ. ಹೇಗೆ ಸದಸ್ಯತ್ವದಿಂದ ಕಿತ್ತಾಕೋಕೆ ಆಗುತ್ತೆ? ಎಂಪಿ ಸ್ಥಾನ ಹೋದರೆ ಪಕ್ಷಕ್ಕೆ ಒಂದು ಸ್ಥಾನ ಲಾಸ್ ಆಗುತ್ತೆ ಅಷ್ಟೇ. ಇಲ್ಲಾ ಪಕ್ಷದಿಂದ ಉಚ್ಚಾಟನೆ ಮಾಡುತ್ತಾ ಮಾಡಲಿ ಅದು ಅವರಿಗೆ ನಷ್ಟ ಎಂದು ಹರಿಹಾಯ್ದರು.
ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಮತದಾರರನ್ನು ಅವಮಾನಿಸುವುದು ಸರಿಯಲ್ಲ. ಜನ ಸ್ವಾಭಿಮಾನ ಎತ್ತಿ ಹಿಡಿದು ಪಕ್ಷೇತರ ಅಭ್ಯರ್ಥಿಯನ್ನು ಗೆಲ್ಲಿಸಿರಬಹುದು. ಅದಕ್ಕೆ ಮತದಾರರು ಹೇಗೆ ಭ್ರಷ್ಟರು ಆಗುತ್ತಾರೆ? ಇದನ್ನ ನಾನು ಒಪ್ಪುವುದಿಲ್ಲ ಎಂದರು.



